ಮಂಗಳೂರು: ನಗರದ ಲೇಡಿಹಿಲ್ ಬಳಿ ಕಾರೊಂದು ಫುಟ್ ಪಾತ್ ಮೇಲೆ ನುಗ್ಗಿದ ಪರಿಣಾಮ ಯುವತಿಯೊಬ್ಬರು ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ. ಮೃತಪಟ್ಟ ಯುವತಿಯನ್ನು ರೂಪಶ್ರೀ(23)ಎಂದು ಗುರುತಿಸಲಾಗಿದೆ. ಸುರತ್ಕಲ್ ನ ನಿವಾಸಿಯಾದ ರೂಪಶ್ರೀ ಅವರು ಕುದ್ರೋಳಿ ದೇವಸ್ಥಾನಕ್ಕೆ ತೆರಳಿ ವಾಪಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ರೂಪಶ್ರೀ ಅವರು ಇತರ ನಾಲ್ವರೊಂದಿಗೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ವಾಪಸ್ ಬರುವಾಗ ಮಣ್ಣಗುಡ್ಡೆಯಿಂದ ಲೇಡಿಹಿಲ್ ಕಡೆಗೆ ಸಾಗುತ್ತಿದ್ದ ಕಾರು ಫುಟ್ ಪಾತ್ ಗೆ ನುಗ್ಗಿ ಗುಂಪಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ರೂಪಾಶ್ರೀ ಅವರು ಸಾವನ್ನಪ್ಪಿದ್ದಾರೆ. ಅವರ ಜತೆ ನಡೆದುಕೊಂಡು ಹೋಗುತ್ತಿದ್ದ ಸ್ವಾತಿ(28), ಹಿತ್ನವಿ(16), ಕೃತಿಕಾ(16) ಮತ್ತು ಯುತಿಕಾ(12) ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾದ ಕಮಲೇಶ್ ಬಲದೇವ್ ಪೊಲೀಸರಿಗೆ ಶರಣು: ತಂದೆಯ ಜತೆ ಠಾಣೆಗೆ ಬಂದ ಆರೋಪಿ
ನಗರದ ಲೇಡಿಹಿಲ್ ಬಳಿ ಫುಟ್ ಪಾತಿಗೆ ಕಾರು ನುಗ್ಗಿಸಿ ಯುವತಿಯ ಸಾವಿಗೆ ಕಾರಣನಾಗಿ ಕಾರಿನೊಂದಿಗೆ ಪರಾರಿಯಾದ ಚಾಲಕನನ್ನು ಬಂಧಿಸಲಾಗಿದ್ದು, ಈತನನ್ನು ಕಮಲೇಶ್ ಬಲದೇವ್ ಎಂದು ಗುರುತಿಸಲಾಗಿದೆ.