ಬೆಂಗಳೂರು: ಹಾವೇರಿ (Haveri) ಗ್ಯಾಂಗ್ ರೇಪ್ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ವರದಿ ಬಂದ ಮೇಲೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ (G.Parameshwar) ತಿಳಿಸಿದ್ದಾರೆ. ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ತನಿಖೆ ಮುಗಿಯುವವರೆಗೂ ನಾವು ಏನನ್ನೂ ಊಹೆ ಮಾಡಲು ಆಗುವುದಿಲ್ಲ.
ನಾವು ಸುಮ್ಮನೆ ಹೇಳಿಕೆ ಕೊಡುವುದರಿಂದ ಉಪಯೋಗವಿಲ್ಲ. ತನಿಖಾ ವರದಿ ಬರಲಿ, ವರದಿ ಬಂದ ಬಳಿಕ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಕರಣದಲ್ಲಿ ಯಾರೇ ಇದ್ದರೂ ಮುಲಾಜಿಲ್ಲದೇ ಕ್ರಮ ತೆಗೆದುಕೊಳ್ಳುತ್ತೇವೆ. ಯಾರ ರಕ್ಷಣೆ ಕೂಡಾ ಮಾಡುವುದಿಲ್ಲ. ಅದರ ಅವಶ್ಯಕತೆಯೂ ಇಲ್ಲ ಎಂದಿದ್ದಾರೆ.
ಮಹಿಳೆಯರಿಗೆ ಕರ್ನಾಟಕ ಸೇಫ್ ಅಲ್ಲ ಎಂಬ ಬಿಜೆಪಿ ಹಾಗೂ ವಿಜಯೇಂದ್ರ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರು ಸರ್ಕಾರ ನಡೆಸಿದ್ದಾರೆ. ಅವರು ಸರ್ಕಾರ ಮಾಡುವಾಗ ಇಂತಹ ಘಟನೆ ಆಗಿಲ್ಲವೇ? ಅದಕ್ಕೆ ನಾವು ಏನ್ ಹೇಳಬೇಕು? ಆಗ ಸೇಫ್ ಇರಲಿಲ್ಲ ಎಂದು ಹೇಳಬೇಕಾ? ಕಾನೂನಿನ ಚೌಕಟ್ಟಿನಲ್ಲಿ ನಾವು ಏನು ಮಾಡಬೇಕೋ ಅದನ್ನ ಮಾಡುತ್ತೇವೆ ಎಂದಿದ್ದಾರೆ.