ಧಾರವಾಡ: ಬಿಜೆಪಿಯವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಮ್ಮ ಸರ್ಕಾರ ದೇವಸ್ಥಾನಗಳಿಗೆ ಉಚಿತವಾಗಿ ಹೋಗಲು ಅವಕಾಶ ಮಾಡಿಕೊಟ್ಟಿದೆ ಎಂದು ಸಚಿವ ಸಂತೋಷ್ ಲಾಡ್ ಬಿಜೆಪಿಗೆ ಕುಟುಕಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷದವರು ಕೇವಲ ಟಿವಿಯಲ್ಲಿ ದೇವರನ್ನು ತೋರಿಸುತ್ತಾರೆ. ನಾವು ದೇವಾಲಯಗಳಿಗೆ ಹೋಗಲು ಉಚಿತ ಪ್ರಯಾಣದ ಅವಕಾಶ ಕಲ್ಪಿಸಿದ್ದೇವೆ.
ಗ್ಯಾರಂಟಿ ಯೋಜನೆಗಳನ್ನು ಕೊಟ್ಟ ನಮ್ಮ ಸಿದ್ದರಾಮಯ್ಯ ಪರ ನೀವು ಇರಬೇಕೊ ಬೇಡವೋ? ಅದಕ್ಕೆ ತಾವು ಬೆಂಬಲ ಕೊಡಬೇಕು ಎಂದು ಫಲಾನುಭವಿಗಳಲ್ಲಿ ಮನವಿ ಮಾಡಿದರು. ನಿಮಗೆ ಐದು ಕೆಜಿ ಅಕ್ಕಿ ಸಿಗುತ್ತಿದೆ, ಅಕ್ಕಿ ಬದಲಿಗೆ ದುಡ್ಡು ಬರುತ್ತಿದೆ. ಯಾರೂ ಹಸಿವಿನಿಂದ ಬಳಲಬಾರದು ಎಂದು ಕಾರ್ಯಕ್ರಮ ತಂದಿದ್ದೇವೆ. ಇದು ಬಿಜೆಪಿ ಗ್ಯಾರಂಟಿ ಅಲ್ಲ, ಕಾಂಗ್ರೆಸ್ ಸರ್ಕಾರದ ಕಾರ್ಯಕ್ರಮ. 9 ವರ್ಷಗಳಿಂದ ಅವರು (ಬಿಜೆಪಿ) ಪ್ರಚಾರ ಮಾಡಲಿಲ್ಲ. ನಮ್ಮ ಗ್ಯಾರಂಟಿಗಳು ಬರುತಿದ್ದಂತೆ ಆ ಹೆಸರು ಕಾಪಿ ಮಾಡಿ ಮೋದಿ ಗ್ಯಾರಂಟಿ ಎನ್ನುತಿದ್ದಾರೆ. ಇತಿಹಾಸವನ್ನು ತಿರುಚಿ ಹೇಳುವ ಕೆಲಸ ಆರಂಭವಾಗಿದೆ ಎಂದರು.