ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದಕ್ಕೀಡಾದ ವರ್ತೂರ್ ಸಂತೋಷ್..?

ಮಂಡ್ಯ: ಹುಲಿ ಉಗುರು ಪ್ರಕರಣದ ಬೆನ್ನಲ್ಲೇ ಮತ್ತೊಂದು ವಿವಾದವನ್ನು ತಮ್ಮ ಮೈಮೇಲೆ ಎಳೆದುಕೊಂಡಿದ್ದಾರೆ ವರ್ತೂರು ಸಂತೋಷ್ (Varthur Santhosh). ಹಳ್ಳಿಕಾರ್ (Hallikar) ಹೆಸರಿಗೆ ಅಪಮಾನ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಹಳ್ಳಿಕಾರ್ ರೈತರು ಸಂತೋಷ್ ಮೇಲೆ ಆಕ್ರೋಶಗೊಂಡಿದ್ದಾರೆ.

ತಮ್ಮ ವರ್ಚಸ್ಸಿಗಾಗಿ ಹಳ್ಳಿಕಾರ್ ಹೆಸರು ಸಂತೋಷ್ ಬಳಸಿಕೊಂಡಿದ್ದಾರೆ ಎಂದು ರೈತರು ಆರೋಪ ಮಾಡಿದ್ದಾರೆ.

ವರ್ತೂರ್ ಸಂತೋಷ್ ಗೆ ಹಳ್ಳಿಕಾರ್ ಒಡೆಯರ್ ಎಂಬ ಹೆಸರು ಕೊಟ್ಟ ಹಿನ್ನೆಲೆಯಲ್ಲಿ ಇಂಥದ್ದೊಂದು ವಿವಾದ ಶುರುವಾಗಿದ್ದು, ಹಳ್ಳಿಕಾರ್ ತಳಿ ಹೆಸರಿಗೆ ವರ್ತೂರ್ ಸಂತೋಷ್ ರಿಂದ ಅಪಮಾನವಾಗಿದೆ ಎಂದು ರೈತರು ಆರೋಪ ಮಾಡಿದ್ದಾರೆ. ಮಂಡ್ಯದಲ್ಲಿ (Mandya) ಸೇರಿದ್ದ ಹಳ್ಳಿಕಾರ್ ಗೋವು ಸಾಕಾಣಿಕೆ ರೈತರು, ಈ ತಳಿಯ ಕುರಿತಂತೆ ವರ್ತೂರು ಸಂತೋಷ ಸ್ಪಷ್ಟೀಕರಣ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಈ ಕುರಿತಂತೆ ಹಳ್ಳಿಕಾರ್ ಬಗ್ಗೆ ಚರ್ಚಾಗೋಷ್ಠಿಯನ್ನೇ ಮಂಡ್ಯದ ರೈತರು ಏರ್ಪಡಿಸಿದ್ದಾರೆ.

ಮಂಡ್ಯದ ಸಿಲ್ವರ್ ಜ್ಯೂಬಲಿ ಪಾರ್ಕ್ ನಲ್ಲಿ ಡಿ.10ರಂದು ನಡೆಯುವ ಬೃಹತ್ ಹಳ್ಳಿಕಾರ್ ಚರ್ಚೆಗೋಷ್ಠಿಗೆ, ಹಳ್ಳಿಕಾರ್ ಕುರಿತಂತೆ ಚರ್ಚೆ ಮಾಡಲು ವರ್ತೂರ್ ಸಂತೋಷ್‌ಗೂ ಆಹ್ವಾನ ಕೊಟ್ಟಿದ್ದಾರೆ ರೈತರು. ಬಿಗ್ ಬಾಸ್ ನಿಂದ ಬಂದ ತಕ್ಷಣ ವರ್ತೂರ್ ಸಂತೋಷ್ ಈ ಕುರಿತಂತೆ ಚರ್ಚೆಗೆ ಬರಬೇಕು ಎಂದಿದ್ದಾರೆ. ಹಳ್ಳಿಕಾರ್ ಹೆಸರು ಒಂದು ಇತಿಹಾಸ ಇರುವಂತಹದ್ದು. ಅಂತಹ ಹೆಸರಿಗೆ ಅಪಮಾನ ಮಾಡುವುದು ಸರಿಯಲ್ಲ. ತಲೆಮಾರಿನಿಂದ ನಮ್ಮ ಹಿರಿಯರು ಹಳ್ಳಿಕಾರ್ ಗೋ ತಳಿ ಬೆಳೆಸಿಕೊಂಡು ಬಂದಿದ್ದಾರೆ. ಹಳ್ಳಿಕಾರ್ ಒಡೆಯ ಎನ್ನುವುದಕ್ಕೆ ಒಂದು ಮಹತ್ವ ಇದೆ ಎಂದು ರೈತರು ಮಾತನಾಡಿದ್ದಾರೆ.

ಹಳ್ಳಿಕಾರ್ ಗೋವುಗಳನ್ನ ಸಾಕುತ್ತಿರುವ ಮೂಲ ರೈತರು ಎಷ್ಟೋ ಜನ ಇದ್ದಾರೆ. ವರ್ತೂರ್ ಸಂತೋಷ್ ಇತ್ತೀಚೆಗೆ ಬಂದು ಹಳ್ಳಿಕಾರ್ ಒಡೆಯರ್ ಹೆಸರು ಇಟ್ಟುಕೊಳ್ಳೋದು ಸರಿಯಲ್ಲ. ವರ್ತೂರ್ ಸಂತೋಷ್ ಅವರು ಒಬ್ಬ ಹಳ್ಳಿಕಾರ್ ಗೋವು ಸಾಕಾಣಿಕೆದಾರ ಅಷ್ಟೇ. ಅವರಿಗೆ ಅವರೇ ಹಳ್ಳಿಕಾರ್ ಒಡೆಯ ಅನ್ನೋದು ಸರಿಯಲ್ಲ. ಇದಕ್ಕೆ ಅವರು ಬಿಗ್ ಬಾಸ್ (Bigg Boss Kannada) ನಿಂದ ಬಂದ ತಕ್ಷಣವೇ ಸ್ಪಷ್ಟೀಕರಣ ನೀಡಬೇಕು.

ಇಲ್ಲ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗುತ್ತೇವೆ. ಯೂಟ್ಯೂಬ್‌ನಲ್ಲಿ ಹಳ್ಳಿಕಾರ್ ಒಡೆಯ ಎಂದು ಬಿಂಬಿಸುವುದು ತಪ್ಪು ಎಂದಿದ್ದಾರೆ ಮಂಡ್ಯದ ರೈತರು. ಮಂಡ್ಯದಲ್ಲಿ ಹಳ್ಳಿಕಾರ್ ತಳಿಯ ಬಗ್ಗೆ ಚರ್ಚಾ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಹಿರಿಯ ರೈತರು, ಪಶುವೈದ್ಯರು, ವಿಜ್ಞಾನಿಗಳು, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಹಾಗಾಗಿ ತಕ್ಷಣವೇ ಸ್ಪಷ್ಟೀಕರಣ ನೀಡಿ ಆ ಹೆಸರನ್ನು ಬಳಸದೇ ತೆಗೆದು ಹಾಕಬೇಕು ಎಂದು ವರ್ತೂರ್ ಸಂತೋಷ್‌ಗೆ ರೈತರು ಎಚ್ಚರಿಕೆ ಕೊಟ್ಟಿದ್ದಾರೆ.

Loading

Leave a Reply

Your email address will not be published. Required fields are marked *