ನವದೆಹಲಿ: ಮಹಾರಾಷ್ಟ್ರದ ರತ್ನಗಿರಿಯಲ್ಲಿ ಭಯೋತ್ಪಾದಕ ದಾವೂದ್ ಇಬ್ರಾಹಿಂನ (Dawood Ibrahim) ಬಾಲ್ಯದ ಮನೆ ಮತ್ತು ಆತನ ಕುಟುಂಬದ ಒಡೆತನದ ಇತರ ಮೂರು ಆಸ್ತಿಗಳನ್ನು ಶುಕ್ರವಾರ ಹರಾಜು ಹಾಕಲಾಗುವುದು. ಸ್ಮಗ್ಲರ್ಸ್ ಮತ್ತು ಫಾರಿನ್ ಎಕ್ಸ್ಚೇಂಜ್ ಮ್ಯಾನಿಪ್ಯುಲೇಟರ್ಸ್ (ಆಸ್ತಿ ಮುಟ್ಟುಗೋಲು) ಕಾಯಿದೆ (SAFEMA) ಅಡಿಯಲ್ಲಿ ಅಧಿಕಾರಿಗಳು ಆಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಜನವರಿ 5 ರಂದು ಮುಂಬೈನಲ್ಲಿ ಹರಾಜು ನಡೆಯಲಿದೆ.
ಕಳೆದ ಒಂಬತ್ತು ವರ್ಷಗಳಲ್ಲಿ ದಾವೂದ್ ಅಥವಾ ಆತನ ಕುಟುಂಬಕ್ಕೆ ಸೇರಿದ 11 ಆಸ್ತಿಗಳನ್ನು ಹರಾಜು ಮಾಡಲಾಗಿದೆ. 4.53 ಕೋಟಿ ರೂ.ಗೆ ರೆಸ್ಟೋರೆಂಟ್ ಮಾರಾಟ ಮಾಡಲಾಗಿದೆ. 3.53 ಕೋಟಿ ರೂ. ಆರು ಫ್ಲಾಟ್ಗಳು ಮತ್ತು 3.52 ಕೋಟಿ ರೂ.ಗೆ ಅತಿಥಿ ಗೃಹ ಕೂಡ ಮಾರಾಟವಾಗಿದೆ.
1993 ರ ಮುಂಬೈ ಸರಣಿ ಸ್ಫೋಟದ ಪ್ರಮುಖ ಆರೋಪಿ ದಾವೂದ್ ಇಬ್ರಾಹಿಂ 1983 ರಲ್ಲಿ ಮುಂಬೈಗೆ ತೆರಳುವ ಮೊದಲು ಮುಂಬಾಕೆ ಗ್ರಾಮದಲ್ಲಿ ವಾಸಿಸುತ್ತಿದ್ದ. 257 ಜನರ ಸಾವಿಗೆ ಕಾರಣವಾದ ಸರಣಿ ಬಾಂಬ್ ಸ್ಫೋಟದ ನಂತರ ಭಾರತ ತೊರೆದಿದ್ದ.
1993, ಮಾರ್ಚ್ 12 ರಂದು ಮುಂಬೈ (ಆಗಿನ ಬಾಂಬೆ) ಸರಣಿ ಬಾಂಬ್ ಸ್ಫೋಟಗಳಿಂದ ತತ್ತರಿಸಿತ್ತು. ದಾಳಿಗೆ 257 ಜನರು ಬಲಿಯಾಗಿದ್ದರು. 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅಂದಾಜು 27 ಕೋಟಿ ರೂ. ಮೌಲ್ಯದ ಆಸ್ತಿ ನಾಶವಾಗಿತ್ತು. ಮಹಾರಾಷ್ಟ್ರ ಸರ್ಕಾರದ ಕೋರಿಕೆಯ ಮೇರೆಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗಿತ್ತು. 2017, ಜೂನ್ 16 ರಂದು ಮುಸ್ತಫಾ ದೊಸ್ಸಾ ಮತ್ತು ಅಬು ಸಲೇಂ ಸೇರಿದಂತೆ ಹಲವಾರು ಆರೋಪಿಗಳನ್ನು ಅಪರಾಧಿಗಳೆಂದು ಘೋಷಿಸಲಾಯಿತು. ವಾಂಟೆಡ್ ಭಯೋತ್ಪಾದಕ ದಾವೂದ್ ಇಬ್ರಾಹಿಂ ದಾಳಿಗಳನ್ನು ಯೋಜಿಸಿದ್ದ.