ವಿಜಯನಗರ : ಯಾವ ಉದ್ದೇಶದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. ಯಾವುದೇ ವ್ಯಕ್ತಿಗೆ ಅಧಿಕಾರ ಕೊಡುವ ನಿರ್ಧಾರ ಹೈಕಮಾಂಡ್ ಬಿಟ್ಟಿದ್ದು. ರಾಜ್ಯದ ನಾಯಕತ್ವದ ಬಗ್ಗೆ ಹೈಕಮಾಂಡ್ಗೆ ತೃಪ್ತಿ ಇದೆ ಎಂದು ಸಿದ್ದರಾಮಯ್ಯ ವಿರುದ್ಧ ಬಿ.ಕೆ.ಹರಿಪ್ರಸಾದ್ ಅಸಮಾಧಾನ ವಿಚಾರವಾಗಿ ಕೊಟ್ಟೂರಿನಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲಗಳು ಇಲ್ಲವೇ ಇಲ್ಲ. ಬದಲಾಗಿ ವಿರೋಧ ಪಕ್ಷವಾದ ಬಿಜೆಪಿಯಲ್ಲಿ ಗೊಂದಲಗಳಿವೆ. ಬಿಜೆಪಿಗೆ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಆಗುತ್ತಿಲ್ಲ.
ಬೆಂಗಳೂರಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಸಭೆ ನಡೆದಿದೆ. ಸಭೆ ಬಗ್ಗೆ ಬಿಜೆಪಿ ವಲಯದಲ್ಲಿ ತಳಮಳ ಉಂಟಾಗಿದೆ. ಪ್ರಧಾನಿ ಮೋದಿ ಮಿತ್ರ ಪಕ್ಷಗಳ ಸಭೆಯನ್ನ ಭ್ರಷ್ಠರ ಕೂಟ ಎಂದಿದ್ದಾರೆ. ಮಿತ್ರ ಪಕ್ಷಗಳು ಮತ್ತು ಕಾಂಗ್ರೆಸ್ನವರು ಭ್ರಷ್ಠರಾಗಿದ್ದರೇ..? 9 ವರ್ಷದಿಂದ ಮೋದಿ ಪ್ರಧಾನಿ ಆಗಿದ್ದಾರೆ, ಯಾಕೆ ಕ್ರಮ ಕೈಗೊಂಡಿಲ್ಲ. ವಿರೋಧಿ ಬಣ ಬಲಗೊಳ್ಳುತ್ತಿದೆ. ಮೋದಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಮೋದಿ ಯಾವಾಗಲು ಅಸತ್ಯವನ್ನ ಜನರ ಮುಂದಿಡುತ್ತಾ ಬಂದಿದ್ದಾರೆ ಎಂದು ಉಗ್ರಪ್ಪ ತಿಳಿಸಿದರು.
ಸಿಎಂ ಸ್ಥಾನದಿಂದ ಇಳಿಸುವುದು ಯಾವ ವ್ಯಕ್ತಿಯ ಕೈಲಿಲ್ಲ: ಸಿದ್ದರಾಮಯ್ಯ ಅವರನ್ನು ಇಡೀ ರಾಜ್ಯದ ಜನರು ಮುಖ್ಯಮಂತ್ರಿ ಮಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಯಾವ ಒಬ್ಬ ವ್ಯಕ್ತಿಯ ಕೈಯಲ್ಲಿಲ್ಲ, ಅದು ಹೈ ಕಮಾಂಡ್ ನಿರ್ಧಾರ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಯುವಜನ ಕ್ರೀಡಾ ಇಲಾಖೆ ಸಚಿವ ಬಿ. ನಾಗೇಂದ್ರ ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ನೀಡಿರುವ ಹೇಳಿಕೆ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು.