Narendra Modi: ನಮ್ಮ ಬದ್ಧತೆಯಿಂದಾಗಿ ಜಗತ್ತು ಈಗ ನಮ್ಮನ್ನು ನೋಡುತ್ತಿದೆ: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಜನೌಷಧಿ ಕೇಂದ್ರಗಳ (Jan Aushadhi Kendra) ಸಂಖ್ಯೆಯನ್ನು 10,000 ದಿಂದ 25,000ಕ್ಕೆ ಹೆಚ್ಚಿಸಲು ನಿರ್ಧರಿಸಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಜನೌಷಧಿ ಕೇಂದ್ರಗಳು ಜನರಿಗೆ ಶಕ್ತಿಯನ್ನು ನೀಡಿದೆ. ಅದರಲ್ಲೂ ಮಧ್ಯಮ ವರ್ಗದ ಜನರಿಗೆ ಹೊಸ ಶಕ್ತಿಯನ್ನು ನೀಡಿದೆ. ಯಾರಿಗಾದರೂ ಮಧುಮೇಹವಿದ್ದರೆ ಮಾಸಿಕ 3,000 ರೂ. ಬಿಲ್ ಬರುತ್ತದೆ. ಜನೌಷಧಿ ಕೇಂದ್ರಗಳ ಮೂಲಕ 100 ರೂ. ಬೆಲೆಯ ಔಷಧಿಗಳನ್ನು ಕೇವಲ 10ರಿಂದ 15 ರೂ.ಗೆ ನೀಡುತ್ತಿದ್ದೇವೆ ಎಂದರು.

ಇದೀಗ ಜನೌಷಧಿ ಕೇಂದ್ರಗಳನ್ನು 10,000 ದಿಂದ 25,000ಕ್ಕೆ ಹೆಚ್ಚಿಸಲು ಸರ್ಕಾರ ಯೋಜನೆ ರೂಪಿಸಿದೆ. ಎಲ್ಲರಿಗೂ ಕೈಗೆಟಕುವ ದರದಲ್ಲಿ ಜೆನೆರಿಕ್ ಔಷಧಗಳು ಲಭ್ಯವಾಗುವಂತೆ ಮಾಡಲು ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೋವಿಡ್ (Covid) ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದ ಸಾಮರ್ಥ್ಯವನ್ನು ಜಗತ್ತು ಕಂಡಿದೆ. ಇತರೆ ದೇಶಗಳ ಪೂರೈಕೆ ಸರಪಳಿಗಳು ಅಡ್ಡಿಪಡಿಸಿದಾಗ ನಾವು ಪ್ರಪಂಚದ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ಮಾನವ ಕೇಂದ್ರಿತ ವಿಧಾನವನ್ನು ಪ್ರತಿಪಾದಿಸಿದ್ದೇವೆ ಎಂದು ಹೇಳಿದರು.

ನಮ್ಮ ಬದ್ಧತೆಯಿಂದಾಗಿ ಜಗತ್ತು ಈಗ ನಮ್ಮನ್ನು ನೋಡುತ್ತಿದೆ. ಕೋವಿಡ್ ಬಳಿಕ ಭಾರತ ವಿಶ್ವಮಿತ್ರವಾಗಿ ಹೊರಹೊಮ್ಮಿದೆ. ಕೋವಿಡ್ ನಂತರ ಭಾರತ ದೇಶವು ಒಂದು ಭೂಮಿ, ಒಂದು ಆರೋಗ್ಯ ವಿಧಾನವನ್ನು ಪ್ರತಿಪಾದಿಸಿದೆ. ರೋಗಕ್ಕೆ ಸಂಬಂಧಿಸಿದಂತೆ ಮನುಷ್ಯರು, ಪ್ರಾಣಿಗಳು ಮತ್ತು ಸಸ್ಯಗಳನ್ನು ಸಮಾನವಾಗಿ ಕಂಡಾಗ ಮಾತ್ರ ಸಮಸ್ಯೆಗಳು ಬಗೆಹರಿಯುತ್ತದೆ ಎಂದರು.

Loading

Leave a Reply

Your email address will not be published. Required fields are marked *