ಮುಂಬೈ: ಚಲಿಸುತ್ತಿದ್ದ ರೈಲಿನಲ್ಲಿ ನಾಲ್ವರಿಗೆ ಗುಂಡಿಕ್ಕಿದ್ದ ರೈಲ್ವೆ ಪೊಲಿಸ್ ಪಡೆ(RPF) ಕಾನ್ಸ್ ಟೆಬಲ್ ಚೇತನ್ ಸಿಂಗ್ ಚೌಧರಿಯನ್ನು ಸೇವೆಯಿಂದ ವಜಾ ಮಾಡಲಾಗಿದೆ. ಜೈಪುರ-ಮುಂಬೈ ಸೆಂಟ್ರಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲಿನಲ್ಲಿ ಜುಲೈ 31ರಂದು ಈ ಘಟನೆ ನಡೆದಿತ್ತು. ಇದೀಗ ಮುಂಬೈ ಕೇಂದ್ರದ ಆರ್ ಪಿಎಫ್ ಹಿರಿಯ ವಿಭಾಗೀಯ ಭದ್ರತಾ ಆಯುಕ್ತರು ಆಗಸ್ಟ್ 14ರಂದು ಚೌಧರಿಯನ್ನು ಸೇವೆಯಿಂದ ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜುಲೈ 31ರಂದು ಮೂವರು ಪ್ರಯಾಣಿಕರಾದ ಅಬ್ದುಲ್ ಖಾದರ್, ಮುಹಮ್ಮದ್ ಹುಸೇನ್ ಭನ್ಪುರವಾಲ, ಸಯ್ಯದ್ ಸೈಫುದ್ದೀನ್ ಹಾಗೂ ಅಸ್ಗರ್ ಅಬ್ಬಾಸ್ ಶೇಖ್ ಅವರು ರೈಲಿನ ವಿವಿಧ ಬೋಗಿಗಳಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆರೋಪಿ ಚೌಧರಿ ರೈಲಿನಲ್ಲಿ ಫೈರಿಂಗ್ ಮಾಡಿದ್ದನು. ಅಲ್ಲದೆ ರೈಲಿನ ಪ್ಯಾಂಟ್ರಿ ಕಾರ್ ಬಳಿ ತೆರಳಿ ಮತ್ತೊಬ್ಬ ಪ್ರಯಾಣಿಕರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ಎಸ್ 6 ಕೋಚ್ಗೆ ತೆರಳಿ ಮತ್ತೊಬ್ಬ ಪ್ರಯಾಣಿಕನ ಮೇಲೆ ಗುಂಡು ಹಾರಿಸಿದ್ದನು.
ಹತ್ಯೆ ಮಾಡಲು ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಮೇಲಧಿಕಾರಿ ಎಎಸ್ಐ ಟಿಕಾರಾಂ ಮೀನಾ ಮತ್ತು ಇತರ ಮೂವರು ಪ್ರಯಾಣಿಕರನ್ನು ಆರೋಪಿ ಚೌಧರಿ ಗುಂಡಿಕ್ಕಿ ಕೊಂದಿದ್ದು ಹೇಗೆ ಎಂಬುದರ ಕುರಿತು ನ್ಯಾಯಾಲಯದ ಅವಲೋಕನದ ನಂತರ ಆರ್ಪಿಎಫ್ ಇಲಾಖೆಯಿಂದ ಈ ನಿರ್ಧಾರವು ಬಂದಿದೆ. ಪ್ರಸ್ತುತ ಆರೋಪಿ ಚೌಧರಿ ಜೈಲಿನಲ್ಲಿ ಮತ್ತು ನ್ಯಾಯಾಂಗ ಬಂಧನದಲ್ಲಿದ್ದಾರೆ.