ಬೆಂಗಳೂರು;- ಶೂ, ಚಪ್ಪಲಿ ಗೋಡೌನ್ನಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ತಡರಾತ್ರಿ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಐದು ಕೋಟಿಗೂ ಅಧಿಕ ಮೌಲ್ಯದ ಶೂಗಳು ಹಾಗೂ ಚಪ್ಪಲಿಗಳು ಸುಟ್ಟು ಭಸ್ಮವಾಗಿವೆ.ಕ್ಯಾಂಟರ್ ಗೋಡೌನ್ ಬಳಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಉತ್ತರಹಳ್ಳಿ ನಿವಾಸಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ASR MARKETING ಮತ್ತು UNICORN MARKETING ಎಂಬ ಹೆಸರಿನ ಗೋಡೌನ್ಗೆ ಸಂಪರ್ಕಿಸಿದ್ದ ವಿದ್ಯುತ್ ತಂತಿಯಿಂದ ಶಾರ್ಟ್ಸರ್ಕ್ಯೂಟ್ ಉಂಟಾಗಿ ಈ ಅವಘಡ ಸಂಭವಿಸಿದೆ.
ಅಗ್ನಿ ಅವಘಡದಿಂದ ಗೋಡೌನ್ನಲ್ಲಿದ್ದ ಅಪಾರ ಮೌಲ್ಯ ಶೂ, ಚಪ್ಪಲಿ ನಾಶಗೊಂಡವೆ. ಪ್ರತಿಷ್ಠಿತ ಕಂಪನಿಗಳ ಶೂ, ಚಪ್ಪಲಿಗಳನ್ನು ಶ್ರೀನಿವಾಸ್ ಅವರು ವಿತರಣೆ ಮಾಡುತ್ತಿದ್ದರು. ಬೆಂಗಳೂರಿನ ಬಹುತೇಕ ಅಂಗಡಿಗಳಿಗೆ ಶೂ, ಚಪ್ಪಲಿಗಳು ಈ ಗೋಡೌನ್ನಿಂದಲೇ ಪೂರೈಕೆ ಆಗುತ್ತಿದ್ದವು. ಹೀಗಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಚಪ್ಪಳಿ ಶೂಗಳನ್ನು ಇಲ್ಲಿ ಶೇಕರಿಸಿ ಇಡಲಾಗಿತ್ತು.
ಗೋಡೌನ್ನಲ್ಲಿ 100ಕ್ಕೂ ಹೆಚ್ಚು ಜನ ಕೆಲಸ ಮಾಡುತ್ತಿದ್ದರು. ಆದರೆ ಅಗ್ನಿ ಅವಘಡದಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ. ಮಾಹಿತಿ ತಿಳಿಯುತ್ತಿದ್ದಂತೆ ಏಳಕ್ಕೂ ಹೆಚ್ಚು ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು, ಸಿಬ್ಬಂದಿಯಿಂದ ಬೆಂಕಿ ನಂದಿಸುವ ಕಾರ್ಯ ನಡೆಸಿದ್ದಾರೆ.