ಕೊಪ್ಪಳ: ದೆಹಲಿಯ ಪಾರ್ಲಿಮೆಂಟ್ ಒಳಗೆ ನುಗ್ಗಿ ಅಧಿವೇಶನದ ವೇಳೆ ನಡೆದ ಸ್ಮೋಕ್ ಬಾಂಬ್ ದಾಳಿಯ ಹಿಂದೆ ಬಿಜೆಪಿ ನಾಯಕರ ಕೈವಾಡ ಇದೆ ಎಂದು ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ (Shivaraj Tangadagi) ಆರೋಪಿಸಿದರು. ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ, ಅಧಿವೇಶನದಿಂದ ಸಂಸದರನ್ನು ಅಮಾನತು ಮಾಡಿದ ನಡೆ ಖಂಡಿಸಿ ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕೇಂದ್ರ ಸರ್ಕಾರದ ಭದ್ರತೆ ವೈಫಲ್ಯದಿಂದಲೇ ಸ್ಮೋಕ್ ಬಾಂಬ್ ದಾಳಿ ನಡೆದಿದೆ. ಘಟನೆ ಕುರಿತು ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ, ಉತ್ತರಿಸುವಂತೆ ಪಟ್ಟು ಹಿಡಿದ ಒಟ್ಟು 145 ಸಂಸದರನ್ನು ಅಮಾನತು ಮಾಡಿ, ಹೊರಗೆ ಹಾಕಲಾಗಿದೆ. ಬಿಜೆಪಿಗರು ತಮ್ಮ ಲೋಪ ಮುಚ್ಚಿ ಹಾಕಲು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ಕಗ್ಗೊಲೆ, ಸರ್ವಾಧಿಕಾರಿ ಧೋರಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಾಳಿ ಮಾಡಿದವರಿಗೆ ನಮ್ಮ ರಾಜ್ಯದ ಸಂಸದ ಪ್ರತಾಪ್ ಸಿಂಹ ಪಾಸ್ ನೀಡಿದ್ದಾರೆ. ಆದರೆ ಪೊಲೀಸರು ಪ್ರತಾಪ್ ಸಿಂಹ ಅವರ ವಿಚಾರಣೆ ನಡೆಸಿಲ್ಲ. ಅವರ ಮೇಲೆ ಕ್ರಮ ಆಗಿಲ್ಲ. ಒಂದೊಮ್ಮೆ ಆರೋಪಿತರ ಹೆಸರುಗಳು ಅಬ್ದುಲ್, ನಜೀರ್, ಖಾನ್ ಆಗಿದ್ದರೆ ಬಿಜೆಪಿಗರು ಇದರ ಚಿತ್ರಣವೇ ಬೇರೆ ಆಗಿಸುತ್ತಿದ್ದರು. ಈ ಬಗ್ಗೆ ಮಾತನಾಡದ ಮೈಸೂರಿನ ಸಿಂಹ ಈಗ ಕಾಡಿಗೆ ಹೋಗಿದೆ ಎಂದು ಸಂಸದ ಪ್ರತಾಪ್ ಸಿಂಹ ಬಗ್ಗೆ ಲೇವಡಿ ಮಾಡಿದರು.