ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಗೆ (Ayodhya) ಬರಲು ಮನಸ್ಸು ಮಾಡಬೇಡಿ. ಜ.22ರ ನಂತರ ದೇವನಗರಿಗೆ ಭೇಟಿ ನೀಡಿ ಎಂದು ರಾಮ ಭಕ್ತರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿನಂತಿ ಮಾಡಿದ್ದಾರೆ. ಪ್ರಧಾನಿ ಮೋದಿ ಬೃಹತ್ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಜನವರಿ 22ರಂದು ನಡೆಯುವ ಕಾರ್ಯಕ್ರಮದ ಭಾಗವಾಗಲು ಪ್ರತಿಯೊಬ್ಬರೂ ಅಯೋಧ್ಯೆಗೆ (Ayodhya) ಬರಲು ಬಯಸುತ್ತಾರೆ. ಆದ್ರೆ ಎಲ್ಲರೂ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂಬುದು ನಿಮಗೂ ತಿಳಿದಿದೆ. ನಾನು ನಿಮ್ಮೆಲ್ಲರಿಗೂ ವಿನಂತಿ ಮಾಡ್ತೀನಿ. ಆದಿನ ಔಪಚಾರಿಕ ಕಾರ್ಯಕ್ರಮ ಪೂರ್ಣಗೊಳಿಸಿದ ನಂತರ ನೀವು ಒಂದು ವಾರ ಬಿಟ್ಟು, ತಿಂಗಳು ಬಿಟ್ಟು ಅಥವಾ ವರ್ಷ ಬಿಟ್ಟು ಬಂದರೂ ರಾಮಮಂದಿರ ನಿಮಗಾಗಿ ಕಾದಿರುತ್ತದೆ. ಜ.22ರ ನಂತರ ಎಲ್ಲರೂ ತಮ್ಮ ಅನುಕೂಲಕ್ಕೆ ತಕ್ಕಂತೆ ಅಯೋಧ್ಯೆಗೆ ಬರಬಹುದು. ಆದ್ರೆ ಅಂದು ಮಾತ್ರ ಅಯೋಧ್ಯೆಗೆ ಬರಲು ಮನಸ್ಸು ಮಾಡಬೇಡಿ ಎಂದು ರಾಮ ಭಕ್ತರಿಗೆ ವಿನಂತಿಸುತ್ತೇನೆ ಎಂದು ತಿಳಿಸಿದರು.
ಇಡೀ ವಿಶ್ವವೇ ಆ ಕ್ಷಣಕ್ಕಾಗಿ ಕಾಯುತ್ತಿದೆ:
ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ನಡೆಯುವ ಪ್ರಾಣ ಪ್ರತಿಷ್ಟಾಪನೆಗಾಗಿ ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಅಂದು 140 ಕೋಟಿ ಭಾರತೀಯರು ಬೆಳಕಿನ ಹಬ್ಬ ದೀಪಾವಳಿ ಆಚರಿಸಬೇಕು. ಅಂದು ಮನೆ ಮನೆಯಲ್ಲೂ `ಶ್ರೀರಾಮ ಜ್ಯೋತಿ’ಯನ್ನು ಬೆಳಗಿಸಬೇಕು. ಅಂದು ಇಡೀ ಭಾರತವೇ `ರಾಮಜ್ಯೋತಿ’ಯಿಂದ ಜಗಮಗಿಸುತ್ತಿರಬೇಕು ಎಂದು ಕರೆ ನೀಡಿದರು.