ದೆಹಲಿ: ಉತ್ತರ ಭಾರತದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ (Rain) ದೆಹಲಿಯ (Delhi) ಹಲವಾರು ಪ್ರದೇಶಗಳು ಜಲಾವೃತವಾಗಿವೆ. ನಗರದ ಮಧ್ಯ ಭಾಗದಲ್ಲಿರುವ ಸುಪ್ರಿಂ ಕೋರ್ಟ್ (Supreme Court) ವರೆಗೂ ಪ್ರವಾಹದ ನೀರು ತಲುಪಿದೆ.
ಪ್ರವಾಹದಿಂದ ಉಂಟಾಗಿರುವ ಹಾನಿಯ ಆದ್ಯತೆಯ ಮೇಲೆ ಸಮಸ್ಯೆ ಬಗೆಹರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸರ್ಕಾರ ಸೂಚಿಸಿದೆ.
ಕೆಲವು ನಿಯಮಗಳ ಉಲ್ಲಂಘನೆಯೇ ಈ ಪ್ರವಾಹಕ್ಕೆ ಕಾರಣವಾಗಿದೆ. ಇದನ್ನು ಸರಿಪಡಿಸಲು ಎಂಜಿನಿಯರ್ಗಳು ರಾತ್ರಿಯಿಡೀ ಕೆಲಸ ಮಾಡುತ್ತಿದ್ದಾರೆ. ಸೇನೆಯ ಸಹಾಯ ಪಡೆಯಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಯಮುನಾ (Yamuna) ನದಿಯ ನೀರಿನ ಮಟ್ಟ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದ್ದು ನಿಧಾನವಾಗಿ ಇಳಿಮುಖವಾಗುತ್ತಿದೆ. ಶುಕ್ರವಾರ (ಇಂದು) ಬೆಳಿಗ್ಗೆ 6 ಗಂಟೆಯ ವೇಳೆಗೆ ಯಮುನಾ ನದಿಯ ನೀರಿನ ಮಟ್ಟವು 208.46 ಮೀಟರ್ಗಳಷ್ಟಿದೆ. ಗುರುವಾರ ರಾತ್ರಿಯ ವೇಳೆಗೆ 208.66 ಮೀಟರ್ ಸಮೀಪ ಇತ್ತು. ಇಂದು ನೀರಿನ ಮಟ್ಟ ಕುಸಿಯಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆಗೆ 208.30 ಮೀಟರ್ ತಲುಪಬಹುದು ಎಂದು ಕೇಂದ್ರ ಜಲ ಆಯೋಗ ಮುನ್ಸೂಚನೆ ನೀಡಿದೆ. ಐಟಿಓ ಮತ್ತು ರಾಜ್ಘಾಟ್ನಲ್ಲಿರುವ ಪ್ರದೇಶಗಳು ಇನ್ನೂ ಮುಳುಗಡೆಯಾಗಿದೆ. ದೆಹಲಿ ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಇಲಾಖೆಯ ಬಳಿ ಇನ್ನೂ ಪ್ರವಾಹದ ಭೀಕರತಯೆ ಎದ್ದು ಕಾಣುತ್ತಿದೆ. ಇದರಿಂದ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಕಡಿತವಾಗಲಿದೆ ಎಂದು ದೆಹಲಿ ಅಧಿಕಾರಿಗಳು ಹೇಳಿದ್ದಾರೆ.
ಪ್ರವಾಹ ಪರಿಸ್ಥಿತಿಯಿಂದಾಗಿ ಶಾಲೆ ಕಾಲೇಜುಗಳನ್ನು ಹಾಗೂ ತೀರ ಅಗತ್ಯವಿಲ್ಲದ ಸರ್ಕಾರಿ ಕಚೇರಿಗಳನ್ನು ಭಾನುವಾರದವರೆಗೆ ಮುಚ್ಚುವಂತೆ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿರ್ದೇಶನ ನೀಡಿದೆ. ಸಿಂಘು ಸೇರಿದಂತೆ ನಾಲ್ಕು ಗಡಿಗಳಿಂದ ನಗರಕ್ಕೆ ಭಾರಿ ಸರಕು ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.