ಬೆಂಗಳೂರು: ಮೇ.13ರಂದು ವಿಧಾನಸಭಾ ಚುನಾವಣೆಗೆ ನಡೆದಂತ ಮತದಾನದ ಮತಎಣಿಕೆ ಕಾರ್ಯ ನಡೆಯಲಿದೆ. ನಗರದ ವಿವಿಧ ಮತಕೇಂದ್ರಗಳಲ್ಲಿ ಮತಎಣಿಕೆ ನಡೆಯುವ ಕಾರಣ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬೆಂಗಳೂರು ನಗರದಾಧ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆ-2023ರ ಮತದಾನದ ಮತಏಣಿಕೆ ದಿನಾಂಕ 13-05-2023ರಂದು ನೆಡೆಯಲಿದೆ. ಮತಎಣಿಕೆ ಕೇಂದ್ರದ ಬಳಿಯಲ್ಲಿ ಕಿಡಿಗೇಡಿಗಳಿಂದ ಪ್ರತಿಭಟನೆ ಸಾಧ್ಯತೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ ಮೇ.13ರಂದು ಬೆಳಿಗ್ಗೆ 6ರಿಂದ ನಿಷೇಧಾಜ್ಞೆ ಜಾರಿಯಾಗಿರುವ ಹಿನ್ನಲೆಯಲ್ಲಿ ಐವರಿಗಿಂತ ಹೆಚ್ಚು ಜನರ ಗುಂಪು ಸೇರುವಂತಿಲ್ಲ. ಮದುವೆ, ಶವಸಂಸ್ಕಾರಕ್ಕೆ ಹೊರತುಪಡಿಸಿ, ಉಳಿದೆಲ್ಲವಕ್ಕೂ ಪ್ರತಿಭಂದಕಾಜ್ಞೆ ಅನ್ವಯಿಸಲಿದೆ ಎಂದು ತಿಳಿಸಿದ್ದಾರೆ.
ನಿಷೇಧಾಜ್ಞೆಯ ಸಂದರ್ಭದಲ್ಲಿ ಸ್ಪೋಟಕ ವಸ್ತು ಸಾಗಾಟ, ಪಟಾಗಿ ಸಿಡಿಸುವುದಕ್ಕೆ ನಿಷೇಧವಿದೆ. ಪ್ರತಿಕೃತಿ ಪ್ರದರ್ಶನ, ದಹನ, ಬಹಿರಂಗ ಘೋಷಣೆ ಕೂಡ ನಿಷೇಧಿಸಲಾಗಿದೆ. ಇದಲ್ಲದೇ ಸಂಗೀತ ನುಡಿಸುವುದು, ಭಿತ್ತಿಪತ್ರ ಪ್ರದರ್ಶಕ್ಕೂ ಬ್ರೇಕ್ ಹಾಕಲಾಗಿದೆ.
ಮೇ.13ರಂದು ಬೆಳಿಗ್ಗೆ 6ಗಂಟೆಯಿಂದ ಮಧ್ಯರಾತ್ರಿ 12ಗಂಟೆಯವರೆಗೆ ಬೆಂಗಳೂರು ನಗರದಾಧ್ಯಂತ 144 ಸೆಕ್ಷನ್ ಅಡಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂಬುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶದಲ್ಲಿ ತಿಳಿಸಿದ್ದಾರೆ.