ಬೆಂಗಳೂರು: ಮಳೆ ಕೊರತೆಯಾದಾಗ ವಿದ್ಯುತ್ ಅಭಾವ ಸೃಷ್ಟಿಯಾಗುತ್ತದೆ. ಆದರೆ ಈ ಕುರಿತಾಗಿ ವಿರೋಧ ಪಕ್ಷಗಳ ಟೀಕೆಯಲ್ಲಿ ಅರ್ಥವಿಲ್ಲ. ವಿರೋಧ ಪಕ್ಷಗಳು ಇರುವುದೇ ವಿರೋಧ ಮಾಡಲು ಎಂದು ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಅಭಾವ ಇದೆ ಈ ಕಾರಣಕ್ಕಾಗಿ ಬರಗಾಲ ಘೋಷಣೆ ಮಾಡಿದ್ದೇವೆ. ಮಳೆ ಹೆಚ್ಚು ಇದ್ದಾಗ ವಿದ್ಯುತ್ ಅಭಾವ ಇರುವುದಿಲ್ಲ ಆದರೆ ಮಳೆ ಕಡಿಮೆ ಆದಾಗ ವಿದ್ಯುತ್ ಅಭಾವ ಆಗುತ್ತೆ. ನಾನು ಇಂಧನ ಇಲಾಖೆಯನ್ನ ನಡೆಸಿದ್ದೇನೆ, ಈ ಅನುಭವದ ಮೇಲೆ ಹೇಳುತ್ತಿದ್ದೇನೆ ಎಂದರು.
ವಿರೋಧ ಪಕ್ಷಗಳು ಇರೋದೇ ವಿರೋಧ ಮಾಡೋಕೆ. ನಮ್ಮ ಗ್ಯಾರಂಟಿ ಯೋಜನೆ ಜಾರಿ ಮಾಡಲು ಆಗುವುದಿಲ್ಲ ಅಂತ ಟೀಕೆ ಮಾಡಿದ್ದರು. ಆದ್ರೆ ನಾವು ಗ್ಯಾರಂಟಿಗಳನ್ನ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ ಎಂದು ತಿರುಗೇಟು ನೀಡಿದರು. ಇಡೀ ದೇಶ ಕರ್ನಾಟಕವನ್ನು ನೋಡುತ್ತಿದೆ. ಉದ್ಯೋಗ ಹೆಚ್ಚಳಕ್ಕೆ ಪ್ರಯತ್ನ ಮಾಡ್ತಿದ್ದೇವೆ. ನಾವು ಮಾಧ್ಯಮಗಳನ್ನ ನಿಯಂತ್ರಣ ಮಾಡಲ್ಲ. ಬೇರೆ ಸರ್ಕಾರಗಳು ಮಾಡಿದಂತೆ ಮಾಡಲ್ಲ. ಮಾಧ್ಯಮಗಳಿಗೆ ಸಂಪೂರ್ಣ ಸಹಕಾರ ನೀಡ್ತೇವೆ ಎಂದರು.