ಮೈಸೂರು: ಬೆಂಗಳೂರಿನ ಟಿಕ್ ಟಾಕ್ ಸ್ಟಾರ್ ಮೈಸೂರಿನಲ್ಲಿ ಕೊಲೆಯಾಗಿರುವ ಪ್ರಕರಣವನ್ನು ನಂಜನಗೂಡು ಪೊಲೀಸರು ಬೇಧಿಸಿದ್ದಾರೆ. ಹೌದು ಈ ಪ್ರಕರಣ ಸಂಬಂಧ ಎಂಟು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಬೆಂಗಳೂರಿನ ಕಗ್ಗಲಿಪುರ ವ್ಯಾಪ್ತಿಯಲ್ಲಿ ನಡೆದಿದ್ದ ವಿನೋದ್ ಎಂಬುವವರ ಕೊಲೆ ಪ್ರಕರಣದಲ್ಲಿ ನವೀನ್ ಜೈಲಿಗೆ ಹೋಗಿ ಬಂದಿದ್ದ. ಬಳಿಕ ಟಿಕ್ ಟಾಕ್ ಮಾಡುತ್ತಿದ್ದರಿಂದ ನವೀನ್ ಟಿಕ್ ಟಾಕ್ ಸ್ಟಾರ್ ಎಂದೆ ಗುರುತಿಸಿಕೊಂಡಿದ್ದ. ಹೀಗಾಗಿ ಆ ಕೊಲೆ ಸೇಡಿಗಾಗಿ ನವೀನ್ ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ಸಿಕ್ಕಿದ್ದು, ಈ ಬಗ್ಗೆ ನಂಜನಗೂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದೇ ತಿಂಗಳು ಇದೇ ಆಗಸ್ಟ್ 27ರಂದು ಟಿಕ್ ಟಾಕ್ ಸ್ಟಾರ್ ನವೀನ್ ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ್ದ. ಇಬ್ಬರು ಯುವತಿಯರ ಜೊತೆ ಮೈಸೂರಿಗೆ ಆಗಮಿಸಿ ಅರಮನೆ ಮುಂದೆ ರೀಲ್ಸ್ ಮಾಡುತ್ತಿದ್ದ ವೇಳೆ ದುಷ್ಕರ್ಮಿಗಳು ರಾತ್ರಿ 9.45ರ ಸಮಯದಲ್ಲಿ ಕಾರಿನಲ್ಲಿ ಬಂದು ಅಪಹರಣ ಮಾಡಿಕೊಂಡು ಹೋಗಿದ್ದರು. ಬಳಿಕ ನಂಜನಗೂಡಿನ ಗೋಳೂರಿನ ನಾಲೆಯಲ್ಲಿ ಶವ ಪತ್ತೆಯಾಗಿತ್ತು. ಅಪರಿಚಿತ ವ್ಯಕ್ತಿಯ ಕೊಲೆ ಎಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.