ಬೆಂಗಳೂರು ಗ್ರಾಮಾಂತರ: ಮಗಳನ್ನು ಮಚ್ಚಿನಿಂದ ಕೊಚ್ಚಿ ತಂದೆ ಮರ್ಯಾದಾ ಹತ್ಯೆ ಮಾಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ ನಡೆದ ಘಟನೆ ಭಾನುವಾರ ತಡವಾಗಿ ಬೆಳಕಿಗೆ ಬಂದಿದೆ. 17 ವಯಸ್ಸಿನ ಹುಡುಗಿ ತಂದೆಯಿಂದ ಕೊಲೆಯಾದ ದುರ್ದೈವಿ. ಹೆಚ್.ಡಿ.ಕೋಟೆ ಮೂಲದವರಾದ ಗಣೇಶ್ ಮತ್ತು ಶಾರದಾ ದಂಪತಿ ಪುತ್ರಿ. ಈಕೆ ಶಾಲೆಗೆ ಹೋಗುವಾಗ ಪ್ರೀತಿಯ ಬಲೆಗೆ ಬಿದ್ದಿದ್ದಳು. ಈ ವಿಚಾರ ತಿಳಿದು ಹೆಚ್.ಡಿ.ಕೋಟೆಯಿಂದ ನಾಗನಾಥಪುರದಲ್ಲಿರುವ ಮಾವನ ಮನೆಗೆ ಕರೆತಂದು ಹುಡುಗಿಯನ್ನು ಬಿಡಲಾಗಿತ್ತು.
ಆದರೆ ಹುಡುಗಿ ನಾಗನಾಥಪುರದ ಮಾವನ ಮನೆಯಿಂದ ಕಾಣೆಯಾಗಿದ್ದಳು. ಪ್ರೀತಿಸಿದ ಹುಡುಗನ ಜೊತೆ ಮನೆ ಬಿಟ್ಟು ಓಡಿ ಹೋಗಿದ್ದಳು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು, ಹುಡುಗಿಯನ್ನು ಪತ್ತೆ ಮಾಡಿ ಕರೆತಂದಿದ್ದರು. ಪೊಲೀಸ್ ಠಾಣೆಯಿಂದ ಆಕೆಯ ಮಾವ ಮನೆಗೆ ಕರೆದೊಯ್ದಿದ್ದರು. ನಿನ್ನೆ ಬೆಳಿಗ್ಗೆ 10:30 ರ ಸುಮಾರಿಗೆ ನಾಗನಾಥಪುರಕ್ಕೆ ಹುಡುಗಿಯ ತಂದೆ ಬಂದಿದ್ದರು. ಈ ವೇಳೆ ಪತ್ನಿ ಶಾರದಾ ಮತ್ತು ಮಗಳ ಜೊತೆ ಗಲಾಟೆ ತೆಗೆದಿದ್ದಾನೆ. ಗಲಾಟೆ ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಮಚ್ಚಿನಿಂದ ಕೊಚ್ಚಿ ಮಗಳನ್ನು ಹತ್ಯೆ ಮಾಡಿದ್ದಾನೆ.