ಬೆಂಗಳೂರು:- ಬೆಂಗಳೂರಿನ ಹೊರವಲಯದಲ್ಲಿ ಸುತ್ತುವ ವರ್ತುಲಾಕಾರದ ಈ ರೈಲುಜಾಲದ ನಿರ್ಮಾಣಕ್ಕೆ ನೈಋತ್ಯ ರೈಲ್ವೇ ಅನುಮತಿಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಇದನ್ನು ಕಾರ್ಯಗತಗೊಳಿಸುವ ಕಾರ್ಯಾಚರಣೆ ಆರಂಭವಾಗಲಿದೆ. ಒಟ್ಟು 287 ಕಿ.ಮೀ. ಉದ್ದದ ವೃತ್ತಾಕಾರದ ಈ ರೈಲು ಮಾರ್ಗ ಬೆಂಗಳೂರಿನ ಪಾಲಿಗೆ ಲೋಕಲ್ ರೈಲು ಸೇವೆಯಾಗಲಿದೆ. ಈ ಮೂಲಕ ಈಗ ಇರುವ ರೈಲುಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.
ಈ ರೈಲು ಯೋಜನೆ ನಮ್ಮ ಮೆಟ್ರೋ ಮತ್ತು ಬೆಂಗಳೂರು ಸಬರ್ಬನ್ ರೈಲು ಸೇವೆಗಳಿಗೆ ಪೂರಕವಾಗಿ ಕೆಲಸ ಮಾಡಲಿದೆ. ವೃತ್ತಾಕಾರದ ರೈಲು ಜಾಲವು ಮೆಟ್ರೋ ನಿಲ್ದಾಣಗಳನ್ನು ಕೂಡಾ ಹಾದು ಹೋಗಲಿದ್ದು, ಒಂದು ಮೆಟ್ರೋ ನಿಲ್ದಾಣದಿಂದ ಆಸುಪಾಸಿನ ಬೇರೆ ಪ್ರದೇಶಗಳಿಗೆ ಹೋಗಲು ಅನುಕೂಲ ಕಲ್ಪಿಸಲಿದೆ. ಮತ್ತು ವೃತ್ತಾಕಾರದ ಪಥದಲ್ಲಿ ಬರುವ ಪ್ರದೇಶಗಳಿಂದ ಮೆಟ್ರೋ ನಿಲ್ದಾಣಗಳಿಗೂ ಸಂಪರ್ಕ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.
ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಸಂಸದರಾಗಿರುವ ಪಿ.ಸಿ. ಮೋಹನ್ ಅವರು ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಲೋಕಲ್ ರೈಲು ಸೇವೆಯಲ್ಲಿ ಕ್ರಾಂತಿಯೇ ಉಂಟಾಲಿದೆ ಎಂದಿದ್ದಾರೆ.
ಈ ಸರ್ಕ್ಯುಲರ್ ರೈಲು ಮಾರ್ಗವು ಸಬ್ ಅರ್ಬನ್ ಮತ್ತು ಮೆಟ್ರೋ ರೈಲಿಗೆ ಪೂರಕವಾಗಿ ಕೆಲಸ ಮಾಡಲಿದೆ. ಈ ನೆಟ್ ವರ್ಕ್ ಮಾರ್ಗವು ಪ್ರಮುಖ ಸ್ಥಳಗಳಾದ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಇರುವ ದೇವನಹಳ್ಳಿ, ಕೈಗಾರಿಕಾ ಪ್ರದೇಶಗಳು ಮತ್ತು ಉಪನಗರಗಳಿಗೆ ಸಮೀಪವಿರುವ ಹೀಲಳಿಗೆ, ದೊಡ್ಡಬಳ್ಳಾಪುರ, ಹೊಸಕೋಟೆ ಮತ್ತು ಇತರ ಪ್ರಮುಖ ಪ್ರದೇಶಗಳನ್ನು ಸಂಪರ್ಕಿಸಲಿದೆ. ಈ ಸೇವೆಯಿಂದ ಉಪನಗರಗಳಲ್ಲಿ ವಾಸವಿದ್ದು ಬೆಂಗಳೂರಿಗೆ ಹೋಗಿ ಬರುವವರಿಗೆ ಸಹಾಯವಾಗಲಿದೆ. ಈ ಮಾರ್ಗದಲ್ಲಿ ಮೆಮು ಮತ್ತು ಡೆಮು ರೈಲುಗಳನ್ನು ಓಡಿಸುವುದರಿಂದ ದೂರ ದೂರಕ್ಕೆ ಸಂಚರಿಸುವ ರೈಲುಗಳ ಸಮಯ ಉಳಿಯುತ್ತದೆ ಎನ್ನಲಾಗಿದೆ.