ತಿರುವನಂತಪುರಂ: ಕೇರಳದ (Kerala) ಎರ್ನಾಕುಲಂನ ಕಳಮಶ್ಶೇರಿಯಲ್ಲಿ (Kalamassery) ನಡೆದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ಚಿಕಿತ್ಸೆ ಫಲಿಸದೇ 12 ವರ್ಷದ ಬಾಲಕಿ ಕೊನೆಯುಸಿರೆಳೆದಿದ್ದಾಳೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 11 ಮಂದಿಯ ಸ್ಥಿತಿ ಗಂಭೀರವಾಗಿದೆ. ಕಳಮಶ್ಶೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಬೆನ್ನಲ್ಲೇ ಇಂದು ಸಿಎಂ ಪಿಣರಾಯಿ ವಿಜಯನ್ (Pinarayi Vijayan) ಸರ್ವಪಕ್ಷ ಸಭೆ ಕರೆದಿದ್ದಾರೆ.
ಭಾನುವಾರ ಸ್ಫೋಟ ಸಂಭವಿಸಿದಾಗ 2,000ಕ್ಕೂ ಹೆಚ್ಚು ಜನರು ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಟಿಫನ್ ಬಾಕ್ಸ್ ನಲ್ಲಿ ಐಇಡಿ ಬಾಂಬ್ ಇಟ್ಟು ಸ್ಫೋಟ ನಡೆಸಿರುವುದು ಗೊತ್ತಾಗಿದೆ. 48 ವರ್ಷದ ಡೊಮಿನಿಕ್ ಮಾರ್ಟಿನ್ ಎಂಬಾತ ತಾನೇ ಬಾಂಬ್ ಇಟ್ಟಿದ್ದು ಅಂತ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪೊಲೀಸರಿಗೆ ಶರಣಾಗುವ ಮುನ್ನ ಫೇಸ್ ಬುಕ್ ಲೈವ್ ಮಾಡಿದ್ದ ಡೊಮಿನಿಕ್ ಮಾರ್ಟಿನ್, ಹಲೋ… ನಾನು ಮಾರ್ಟಿನ್ ಎಂದು ಪರಿಚಯಿಸಿದ್ದಾನೆ. ಬಳಿಕ ಯಹೋವನ ಸಾಕ್ಷಿಗಳ ಜೊತೆ 16 ವರ್ಷ ಕೆಲಸ ಮಾಡಿದ್ದೇನೆ. ಯಹೋವನ ಸಾಕ್ಷಿಗಳು ದೇಶ ವಿರುದ್ಧ ಕೆಲಸಗಳಲ್ಲಿ ತೊಡಗಿದ್ದಾರೆ. ಇದನ್ನು ಸರಿಪಡಿಸಿಕೊಳ್ಳಿ ಎಂದು ಮನವಿ ಮಾಡಿದೆ. ಆದರೆ ಯಾರೂ ಸರಿಪಡಿಸಲಿಲ್ಲ ಎಂದು ಹೇಳಿದ್ದಾನೆ.
ರಿಮೋಟ್ ಬಳಸಿ ಸ್ಫೋಟ ಮಾಡಿದ್ದ ಮಾರ್ಟಿನ್, ಈ ದೃಶ್ಯಗಳನ್ನು ತನ್ನ ಮೊಬೈಲಲ್ಲಿ ಚಿತ್ರೀಕರಿಸಿದ್ದಾನೆ. ಸ್ಫೋಟಕದ ಜೊತೆ ಪೆಟ್ರೋಲ್ ತುಂಬಿದ್ದ ಬಾಟ್ಲಿ ಕೂಡ ಇಟ್ಟಿದ್ದನು. ರಿಮೋಟ್ ಟ್ರಿಗರ್ ಮಾಡುವ ವೀಡಿಯೋ ಫುಲ್ ರೆಕಾಡಿರ್ಂಗ್ ಮಾಡಿದ್ದು, ಮಾರ್ಟಿನ್ ಮೊಬೈಲಲ್ಲಿದ್ದ ಈ ವೀಡಿಯೋ ಸಾಕ್ಷ್ಯ ಪೆÇಲೀಸರಿಗೆ ಲಭ್ಯವಾಗಿದೆ. ಸದ್ಯ ಆರೋಪಿ ವಿಚಾರಣೆ ಮುಂದುವರಿದಿದ್ದು, ಮಧ್ಯಾಹ್ನದ ಬಳಿಕ ನ್ಯಾಯಾಲಯದ ಎದುರು ಹಾಜರುಪಡಿಸಿ ಪೊಲೀಸರು ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.