ನವದೆಹಲಿ: ಐನ್ಡಿಐಎ ಮೈತ್ರಿಕೂಟದ ಮಿತ್ರಪಕ್ಷ ಕಾಂಗ್ರೆಸ್ ವಿರುದ್ಧ ಇತ್ತೀಚೆಗಷ್ಟೇ ಕಿಡಿಕಾರಿದ್ದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುವುದಾಗಿ ಎಲ್ಲಾ ರಾಜ್ಯಗಳಲ್ಲಿಯೂ ಘೋಷಿಸುತ್ತಿರುವ ಕಾಂಗ್ರೆಸ್ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿರೋಧ ಪಕ್ಷಗಳ ಐಎನ್ಡಿಐಎ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಇತರ ಪಕ್ಷಗಳ ಜತೆಗಿರುವ ಅಖಿಲೇಶ್, ಇತ್ತೀಚೆಗಷ್ಟೇ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಡೆಯ ವಿರುದ್ಧ ಹರಿಹಾಯ್ದಿದ್ದರು. ಈಗ ಅವರು ಕಾಂಗ್ರೆಸ್ನ ಜಾತಿ ಗಣತಿ ಮಂತ್ರದ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್ನ ‘ಜಾತಿ ಗಣತಿ’ ನಡೆಯು ‘ಒಂದು ಪವಾಡ’ ಎಂದು ಟೀಕಿಸಿರುವ ಅವರು, “ಹಿಂದುಳಿದ ಜಾತಿಗಳ ಬೆಂಬಲ ಇಲ್ಲದೆ ನಿಮಗೆ ಯಶಸ್ಸು ಪಡೆಯುವುದು ಸಾಧ್ಯವಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ” ಎಂದಿದ್ದಾರೆ.
“ಕಾಂಗ್ರೆಸ್ ಪಕ್ಷವು ಜಾತಿ ಗಣತಿ ಬಯಸಿರುವುದು ಒಂದು ಪವಾಡ. ಅವರು ಹುಡುಕುತ್ತಿರುವ ಮತವು ಈಗ ತಮ್ಮ ಬಳಿ ಇಲ್ಲ ಎನ್ನುವುದು ಅವರಿಗೆ ಈಗ ಅರಿವಾಗಿದೆ” ಎಂದಿರುವ ಎಸ್ಪಿ ನಾಯಕ, ಇದೇ ಕಾಂಗ್ರೆಸ್ ಪಕ್ಷವು ಜಾತಿ ಗಣತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದ್ದಾರೆ.