ಹುಬ್ಬಳ್ಳಿ: ಕರ್ನಾಟಕ ಶಾಂತಿದೋಟ ಇಂತಹ ಹಿಂಸೆ ನಡೆಯಬಾರದು. ಸೌಜನ್ಯ ಹತ್ಯೆ ಪ್ರಕರಣ ನನಗೆ ಸಾಕಷ್ಟು ನೋವು ಕೊಟ್ಟಿದೆ. ಇದನ್ನೇ ನೆಪವಾಗಿಟ್ಟುಕೊಂಡು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೇಲೆ ಆರೋಪ ಮಾಡುವುದನ್ನು ನಾನು ಸಹಿಸುವುದಿಲ್ಲ ಅಂತ ಜೈನ ಮುನಿ ಗುಣದರನಂದಿ ಶ್ರೀ ಹೇಳಿದ್ದಾರೆ.
ಹುಬ್ಬಳ್ಳಿ ಹೊರ ವಲಯದ ನವಗ್ರಹ ತೀರ್ಥ ಪೀಠದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಣ್ಣಿನ ಮೇಲೆ ಅತ್ಯಾಚಾರ, ಹತ್ಯೆ ಆಗಬಾರದು. ಎಲ್ಲರ ಜೀವ ಒಂದೇ. ಸೌಜನ್ಯ ಹತ್ಯೆಯನ್ನು ನಾನು ಖಂಡನೆ ಮಾಡುತ್ತೇನೆ. ಈ ಹತ್ಯೆ ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು. ಆದರೆ ವೀರೇಂದ್ರ ಹೆಗ್ಗಡೆಯವರ ಮೇಲೆ ಸುಮ್ಮನೆ ಸುಮ್ಮನೆ ಆರೋಪ ಸರಿಯಲ್ಲ ಎಂದರು.
ಕರ್ನಾಟಕ ರಾಜ್ಯವನ್ನು ದೇಶಕ್ಕೆ ವಿಶ್ವಕ್ಕೆ ಪರಿಚಯ ಮಾಡಿದವರು, ಧರ್ಮಸ್ಥಳಕ್ಕೆ ಅಪವಿತ್ರ ಶಬ್ದಗಳು ಬರಬಾರದು. ಪದೇ ಪದೇ ಅಪ್ರಚಾರ ಮಾಡಿ ಹೆಗ್ಗಡೆಯವರಿಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಅವರ ವಿರುದ್ಧ ಈ ರೀತಿ ಅಪ್ರಚಾರ ಬೇಡ. ಯಾವುದೇ ಆಧಾರವಿಲ್ಲದೆ ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡುವುದು ಸರಿಯಲ್ಲ. ನಾನು ಅವರ ಜೊತೆಗೆ ಫೋನ್ ನಲ್ಲಿ ಮಾತನಾಡಿದ್ದೇನೆ. ಅವರು ನನ್ನ ಬಳಿ ನೋವು ತೋಡಿಕೊಂಡಿದ್ದಾರೆ. ಅವರು ತಪ್ಪು ಮಾಡಿದ್ದರೆ ಅವರಿಗೆ ಶಿಕ್ಷೆ ನೀಡಲಿ. ಹತ್ಯೆಯ ಬಗ್ಗೆ ಮತ್ತೆ ತನಿಖೆ ಮಾಡಲಿ. ನಮಗೆ ಸಂವಿಧಾನದ ಮತ್ತು ಸರ್ಕಾರದ ಮೇಲೆ ನಂಬಿಕೆಯಿದೆ ಎಂದು ಹೇಳಿದರು.