ಮೈಸೂರು: ಇಸ್ರೇಲ್ ಯುದ್ಧದಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ನಿವಾಸಿ ಕುಟುಂಬ ಸಮೇತ ಸಿಲುಕಿದ್ದು, ರಕ್ಷಣೆಗೆ ಮುಂದಾಗುವಂತೆ ಸರ್ಕಾರವನ್ನು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಚೇತನ್, ಪತ್ನಿ ಶಿಲ್ಪಾ ಹಾಗೂ ಎರಡು ವರ್ಷದ ಮಗು ಇಸ್ರೇಲ್ನ ರಹೋತ್ನದಲ್ಲಿ ಸಿಲುಕಿದ್ದು, ಬಂಕರ್ನಲ್ಲಿ ಆಶ್ರಯ ಪಡೆದಿರುವುದಾಗಿ ತಿಳಿದುಬಂದಿದೆ. ಪ್ಯಾಲೆಸ್ತೀನ್ನ ಹಮಾಸ್ ಉಗ್ರರ ಗಂಪು ಇಸ್ರೇಲ್ ಮೇಲೆ ದಾಳಿ ಮಾಡಿದಾಗಿನಿಂದ ಇಸ್ರೇಲ್-ಹಮಾಸ್ ನಡುವೆ ಯುದ್ಧ ಆರಂಭವಾಗಿದೆ. ಈಗಾಗಲೇ ಯುದ್ಧದಲ್ಲಿ ಸಾವಿರಾರು ಮಂದಿ ಪ್ರಾಣ ಕಳೆಕೊಂಡಿದ್ದಾರೆ. ಜೀವ ಕಳೆದುಕೊಂಡವರಲ್ಲಿ ವಿದೇಶಿ ಪ್ರಜೆಗಳೂ ಇದ್ದಾರೆ. ಇದೀಗ ಚೇತನ್ ಕುಟುಂಬ ಸಹ ಆತಂಕಕ್ಕೀಡಾಗಿದೆ.
ಕ್ಯಾನ್ಸರ್ ರೋಗದ ಕುರಿತು ಉನ್ನತ ಶಿಕ್ಷಣಕ್ಕಾಗಿ ಎರಡು ವರ್ಷದ ಹಿಂದೆ ಚೇತನ್ ಇಸ್ರೇಲ್ಗೆ ತೆರಳಿದ್ದಾರೆ. ವೈಸ್ ಮ್ಯಾನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕಳೆದ ಮಾರ್ಚ್ ತಿಂಗಳಲ್ಲಿ ಪತ್ನಿ ಮತ್ತು ಮಗುವನ್ನು ಕರೆಸಿಕೊಂಡಿದ್ದರು. ಇದೀಗ ಇಸ್ರೇಲ್ನಲ್ಲಿ ಯುದ್ಧದ ಪರಿಸ್ಥಿತಿ ಆವರಿಸಿದ್ದು, ಇಡೀ ಕುಟುಂಬ ಆತಂಕದಲ್ಲಿದೆ.ವಿಡಿಯೋ ಕಾಲ್ ಮೂಲಕ ಚೇತನ್ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಆತಂಕದಲ್ಲಿ ಸಮಯ ಕಳೆಯುತ್ತಿರುವುದಾಗಿ ಮತ್ತು ಆದಷ್ಟು ಬೇಗ ತಮ್ಮನ್ನು ರಕ್ಷಣೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಚೇತನ್ ಬಗ್ಗೆ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ. ಯಾರೂ ಕೂಡ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಜಿಲ್ಲಾಡಳಿತ ಹಾಗೂ ಸರ್ಕಾರದ ವಿರುದ್ಧ ಚೇತನ್ ಕುಟುಂಬಸ್ಥರು ಬೇಸರ ಹೊರಹಾಕಿದ್ದಾರೆ.