ಬೆಂಗಳೂರು: ನಗರದ ದಕ್ಷಿಣ ವಲಯ ಜಯನಗರ ವಿಧಾನಸಭಾ ಕ್ಷೇತ್ರ ತಿಲಕನಗರ ವ್ಯಾಪ್ತಿಯಲ್ಲಿ ಬರುವ ಎಂ.ಎಸ್ ಕಟ್ಟಡ ಹಾಗೂ ರಾಗಿ ಗುಡ್ಡದ ಬಳಿ ಇರುವ ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಸ್ಥಳೀಯ ಶಾಸಕರಾದ ಶ್ರೀ ಸಿ.ಕೆ ರಾಮಮೂರ್ತಿ ಹಾಗೂ ವಲಯ ಆಯುಕ್ತರಾದ ಶ್ರೀ ಜಯರಾಮ್ ರಾಯಪುರ ರವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎಂ.ಎಸ್ ಕಟ್ಟಡ ಪರಿಶೀಲನೆ:
ಜಯನಗರ ವಿಧಾನಸಭಾ ಕ್ಷೇತ್ರ ತಿಲಕನಗರ ವ್ಯಾಪ್ತಿಯ ಪಾಲಿಕೆ ಜಾಗದಲ್ಲಿ ಸ್ಲಂ ಬೋರ್ಡ್ ವತಿಯಿಂದ ನಿರ್ಮಾಣ ಮಾಡಿರುವ ಎಂ.ಎಸ್ ಕಟ್ಟಡಕ್ಕೆ 50 ವರ್ಷಗಳಾಗಿದ್ದು, ಈ ಪೈಕಿ ಶಾಸಕರು, ವಲಯ ಆಯುಕ್ತರು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿ ನಿವಾಸಿಗಳ ಜೊತೆ ಕುಂದು-ಕೊರತೆಗಳನ್ನು ಆಲಿಸಿದರು.
ಕಳೆದ 50 ವರ್ಷಗಳ ಹಿಂದೆ ಸ್ಲಂ ಬೋರ್ಡ್ ವತಿಯಿಂದ ಪಾಲಿಕೆ ಜಾಗದಲ್ಲಿ ಎಂ.ಎಸ್ ಕಟ್ಟಡ ನಿರ್ಮಾಣ ಮಾಡಲಾಗಿದ್ದು, ಸದರಿ ಕಟ್ಟಡದಲ್ಲಿ 64 ಮನೆಗಳಿವೆ. ಪಾಲಿಕೆ ವತಿಯಿಂದ 64 ಮನೆಗಳಲ್ಲಿ ವಾಸಿಸುವ ನಿವಾಸಿಗಳಿಗೆ ಖಾತೆಯನ್ನು ಹಂಚಿಕೆ ಮಾಡಲಾಗಿದ್ದು, ಕಟ್ಟಡ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ದುರಸ್ಥಿ ಕಾಮಗಾರಿಗಳನ್ನು ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಎಂ.ಎಸ್ ಕಟ್ಟಡಕ್ಕೆ 50 ವರ್ಷಗಳಾಗಿದ್ದು, ತುಂಬಾ ಹಳೆಯದಾಗಿರುವುದರಿಂದ ಅದನ್ನು ತೆರವುಗೊಳಿಸಿ ಅದೇ ಸ್ಥಳದಲ್ಲಿ ಕಟ್ಟಡ ನಿರ್ಮಿಸಲು ಅನುದಾನ ಮೀಸಲಿಡಲಾಗಿತ್ತು. ಆದರೆ, ಕಟ್ಟಡದಲ್ಲಿ ವಾಸವಿರುವ ನಿವಾಸಿಗಳು ಕಟ್ಟಡ ತೆರವುಗೊಳಿಸಿ ನಿರ್ಮಾಣ ಮಾಡಲು ಸಾಕಷ್ಟು ಸಮಯಾವಕಾಶ ಬೇಕಿದೆ. ಈ ಸಂಬಂಧ ಹಾಲಿ ಕಟ್ಟಡದಲ್ಲಿ ವಾಸವಿರುವ ಎಲ್ಲಾ ಕುಟುಂಬಗಳಿಗೆ ಖಾಲಿ ನಿವೇಶನ(ಸೈಟ್) ನೀಡಲು ಮನವಿ ಮಾಡಿದರು. ಇದಕ್ಕೆ ವಲಯ ಆಯುಕ್ತರು ಪ್ರತಿಕ್ರಿಯಿಸಿ, ಎಂ.ಎಸ್ ಕಟ್ಟಡದಲ್ಲಿ ವಾಸವಿರುವ ನಿವಾಸಿಗಳಿಗೆ ಸೈಟ್ ನೀಡುವ ವಿಚಾರವಾಗಿ ನಿಯಮಾನುಸಾರ ಪರಿಶೀಲಿಸಿ ಪ್ರಸ್ತಾವನೆ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.