ಮಾಗಡಿ: MP ಚುನಾವಣೆಯಲ್ಲಿ ಕಾಂಗ್ರೆಸ್ ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಗ್ಯಾರಂಟಿ ರದ್ದು ಮಾಡೋದು ಒಳ್ಳೆಯದು ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಶ್ರೀಗಿರಿಪುರದಲ್ಲಿ ನಿನ್ನೆ ನಡೆದ ಜನಸ್ಪಂದನ ಸಭೆಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯ ಧರ್ಮ ರಾಜಕಾರಣದ ಮಂತ್ರಾಕ್ಷತೆ ಬೇಕೋ ಅಥವಾ ಜನಸಾಮಾನ್ಯರ ಜೀವನ ಬದಲಿಸುತ್ತಿರುವ ಕಾಂಗ್ರೆಸ್ನ ಗ್ಯಾರಂಟಿ ಬೇಕೊ ಎಂದು ಜನ ಈ ಚುನಾವಣೆಯಲ್ಲಿ ತೀರ್ಮಾನ ಮಾಡಬೇಕು’ ಎಂದರು.
ನಾವೆಲ್ಲರೂ ಹಿಂದೂಗಳು. ಆದರೆ, ದೇವರು ಮತ್ತು ದೇವಸ್ಥಾನದ ಹೆಸರಿನಲ್ಲಿ ರಾಜಕಾರಣ ಮಾಡಿ ಮತ ಪಡೆಯೋದು ಸರಿಯಲ್ಲ. ಹಾಗಾಗಿ, ಚುನಾವಣೆಯಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದೇವೆ. ಅವುಗಳ ಆಧಾರದ ಮೇಲೆಯೇ ಜನರ ಬಳಿ ಮತ ಕೇಳುತ್ತೇವೆ’ ಎಂದು ತಿಳಿಸಿದರು.
‘ಒಂದು ವೇಳೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ನಾವೇನಾದರೂ ಕಡಿಮೆ ಸ್ಥಾನ ಗಳಿಸಿದರೆ, ಜನ ಗ್ಯಾರಂಟಿಗಳನ್ನು ತಿರಸ್ಕರಿಸಿದ್ದಾರೆ ಎಂದರ್ಥ. ಆಗ, ಅವುಗಳನ್ನು ರದ್ದು ಮಾಡಿ ನಾವೂ ಅವರಂತೆ ಮಂದಿರದ ರಾಜಕಾರಣ ಮಾಡಬೇಕಾಗುತ್ತದೆ’ ಎಂದರು.