ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿರುದ್ಧ ಕಾಂಗ್ರೆಸ್ (Congress) ಮುಖಂಡ ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿರುವುದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಹರಿಪ್ರಸಾದ್ ಅವರಿಗೆ ಅಸಮಾಧಾನ ಯಾಕೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಓರ್ವ ಪ್ರಮುಖ ರಾಜಕಾರಣಿ ಆ ಥರ ಮಾತನಾಡೋದು ಸರಿಯಲ್ಲ. ಅವರು ಯಾರ ಬಗ್ಗೆ, ಯಾಕೆ ಟೀಕೆ ಮಾಡ್ತಾರೆ ಅನ್ನೋದೇ ಅರ್ಥವಾಗ್ತಿಲ್ಲ ಎಂದರು.
ಹೈಕಮಾಂಡ್ ಈಗಾಗ್ಲೇ ಅವರಿಗೆ ಏನೂ ಮಾತನಾಡಬೇಡಿ ಎಂದು ಹೇಳಿದೆ. ಆದರೂ ಅವರು ಈ ರೀತಿ ಮಾತನಾಡ್ತಿರೋದು ಸರಿಯಲ್ಲ. ನಮೆಗೆಲ್ಲರಿಗೂ ಪಕ್ಷದಲ್ಲಿ ಸ್ಥಾನ ಸಿಗುತ್ತೆ ಮತ್ತು ಹೋಗುತ್ತೆ ಆದರೆ ಒಂದು ಸಾರ್ವಜನಿಕ ವೇದಿಕೆಯಲ್ಲಿ ಆ ರೀತಿ ಮಾತನಾಡಬಾರದು. ಇದರಿಂದ ಯಾರಿಗೂ ತೊಂದರೆ ಆಗಿಲ್ಲ, ಅವರಿಗೇ ಡ್ಯಾಮೇಜ್ ಆಗ್ತಿದೆ. ನಮ್ಮ ಪಕ್ಷ ಎಂದೂ ಬೇಧ-ಭಾವ ಮಾಡಿಲ್ಲ ಎಂದಿದ್ದಾರೆ.