ಬೆಂಗಳೂರು: ಕಾಂಬೋಡಿಯಾ ಪ್ರವಾಸ ಮುಗಿಸಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ರಾಜ್ಯದ ಸಚಿವರ ವಿರುದ್ಧ ಗರಂ ಆದರು. ರಾಜ್ಯದ ಕೆಲವು ಸಚಿವರು, ನೀವು ವಿದೇಶದಲ್ಲಿ ಇದ್ದುಬಿಡಿ ಎಲ್ಲ ವ್ಯವಸ್ಥೆ ಮಾಡಿ ಕೊಡ್ತೀವಿ ಅಂದಿದ್ರಲ್ಲ. ಇಲ್ಲಿ ಲೂಟಿ ಹೊಡೆಯೋಕೆ ನಮ್ಮನ್ನ ಬಿಟ್ಬಿಡಿ, ನೀವು ವಿದೇಶದಲ್ಲಿ ಇರಿ ಅಂತ ಸಲಹೆ ಕೊಟ್ಟಿದ್ರಲ್ಲಾ. ಅದನ್ನ ಪಾಲಿಸಬೇಕಲ್ಲ. ಯಾಕೆಂದರೆ ಇಲ್ಲಿ ದರೋಡೆ ಮಾಡಿಕೊಂಡು ಕೂತವ್ರಲ್ಲಾ, ಮಾನ ಮಾರ್ಯಾದೆ ಇಲ್ಲದೆ ಎಂದು ವಾಗ್ದಾಳಿ ನಡೆಸಿದರು.
ನಾನು ಅವರಿಂದ ವ್ಯವಸ್ಥೆ ಮಾಡಿಕೊಂಡು ಹೋಗಬೇಕಾ..?, ಆ ಪಾಪದ ಹಣ ತಗೊಂಡು ಹೋಗಬೇಕಾ ಎಂದು ಪ್ರಶ್ನಿಸಿದ ಹೆಚ್ಡಿಕೆ, ಕಳೆದ 12 ವರ್ಷದಿಂದ ಪಕ್ಷದ ಸಂಘಟನೆಗೆ ಸಮಯ ಇಟ್ಟಿದ್ದೆ. ದೇಶ ಸುತ್ತು, ಕೋಶ ಓದು ಅಂತಾ ಹಿರಿಯರ ಗಾದೆ ಮಾತಿದೆ. ಯಾವ ದೇಶದಲ್ಲಿ ಏನೇನಿದೆ ಅಂತಾ ತಿಳ್ಕೊಬೇಕಲ್ಲ. ಅಲ್ಲಿ ಯಾವ ರೀತಿ ಇದೆ, ನಮ್ಮಲ್ಲಿ ಯಾವ ರೀತಿ ಇದೆ ನೋಡಬೇಕು. ಅದ್ದರಿಂದ ಕಾಂಬೋಡಿಯಾಗೆ ಸ್ನೇಹಿತರ ಆಹ್ವಾನ ಇತ್ತು, ಹೋಗಿದ್ದೆ ಎಂದರು.
ಅಲ್ಲಿ 18-20 ಎಕರೆಯಲ್ಲಿ ಕಟ್ಟಿರುವ ಅದ್ಭುತವಾದ ದೇವಸ್ಥಾನ ಇದೆ. ನಮ್ಮ ದೇಶದಲ್ಲೂ ಇಲ್ಲ, ಅಂತ ದೇವಸ್ಥಾನ. ಬ್ರಹ್ಮ, ವಿಷ್ಣು, ಮಹೇಶ್ವರ ದೇವಸ್ಥಾನ. ಇತ್ತೀಚೆಗೆ ಆ ದೇಶ ಆರ್ಥಿಕವಾಗಿ ಬೆಳೆಯುತ್ತಿದೆ. ಒಂದು ಕಾಲದಲ್ಲಿ ಹಲವಾರು ಸಮಸ್ಯೆ ಇತ್ತು. ಈಗ ತುಂಬಾ ಅದ್ಭುತವಾಗಿ ಆ ದೇಶ ಬೆಳೆಯುತ್ತಿದೆ. ಕಾಂಬೋಡಿಯಾದಲ್ಲಿ ಜಿಡಿಪಿ 7.7 ಅಂತ ಮೊನ್ನೆ ಮಂತ್ರಿಯೊಬ್ಬರು ಹೇಳ್ತಾ ಇದ್ರು. ನಮ್ಮಲ್ಲಿ ಹಣದ ಕೊರತೆ ಇಲ್ಲ, ಈಗ ಲೂಟಿ ಮಾಡ್ತಾವ್ರಲ್ಲ. ಈಗ ಒಳಗಡೆ ಟಿವಿಯಲ್ಲಿ ಮಧ್ಯಪ್ರದೇಶ 40% ಸರ್ಕಾರ ಅಂತಾ ಹೇಳಿ ಪೋಸ್ಟರ್ ಹಾಕ್ಕೊಂಡಿದ್ದಾರೆ. ದೇಶ ಎಲ್ಲಿಗೆ ತಗೊಂಡು ಹೋಗ್ತಿದ್ದಾರೆ. ಹಲವಾರು ಬಡತನದ ದೇಶಗಳು ಬೆಳೀತಾ ಇವೆ. ಈಗ ಸಮಯ ಸಿಕ್ಕಿದೆ. ಸ್ವಲ್ಪ ಬೇರೆ ದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಅಭಿವೃದ್ಧಿ ಬಗ್ಗೆ ನೋಡ್ತಾ ಇದ್ದೀನಿ ಎಂದು ತಿಳಿಸಿದರು.