ಶಿವಮೊಗ್ಗ: ಕೇಂದ್ರ ಸರ್ಕಾರ, ಪ್ರಧಾನಿ ಮೋದಿಯವರುಉಚಿತವಾಗಿ ಗ್ಯಾಸ್ ಕೊಡುತ್ತೇವೆ ಎಂದು ಹೇಳಿ ಈಗ 200 ರೂ. ಕಡಿಮೆ ಮಾಡಿದ್ದಾರೆ. ಪುಗ್ಸಟ್ಟೆ ಕೊಡುತ್ತೇವೆ ಎಂದು ಹೇಳಿದ ಮಾತು ಉಳಿಸಿಕೊಳ್ಳಲಿ. ಉಚಿತವಾಗಿ ಅವರು ಗ್ಯಾಸ್ ಕೊಡಲಿ ನಾನೇ ಹೋಗಿ ಹಾರ ಹಾಕಿ ಸನ್ಮಾನ ಮಾಡ್ತೇನೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು,ರಾಜ್ಯದಲ್ಲಿ ಇತಿಹಾಸ ಪುಟಕ್ಕೆ ಸೇರುವ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಕೊಡುತ್ತಿದೆ. ಬಡ ಹೆಣ್ಣುಮಕ್ಕಳಿಗೆ ಅಂದ್ರೆ ಮನೆಯೊಡತಿಗೆ 2 ಸಾವಿರ ಕೊಡುತ್ತಿದ್ದೇವೆ. ಬೆಲೆ ಏರಿಕೆಯ ನಡುವೆ ಕುಟುಂಬದ ನಿರ್ವಹಣೆಗೆ ಕೊಡಲಾಗ್ತಿದೆ. ಅನ್ನಭಾಗ್ಯ, ಗೃಹಜ್ಯೋತಿ, ಹಾಗೂ ಶಕ್ತಿ ಯೋಜನೆ ಈಗಾಗಲೇ ಕೊಟ್ಟಿದ್ದೇವೆ ಎಂದು ಹೇಳಿದರು.
ರಾಜ್ಯ ಬಿಜೆಪಿ ಸ್ಥಾನವನ್ನು ಮೋದಿ ತೋರಿಸಿಕೊಟ್ಟಿದ್ದಾರೆ
ವಿರೋಧ ಪಕ್ಷದವರು ಟೀಕೆ ಟಿಪ್ಪಣಿ ಮಾಡುತ್ತಿದ್ರು. ಅವರನ್ನು ನಾವು ದೂರ ನಿಲ್ಲಿಸೋದು ಬೇಡ. ಅವರ ಪ್ರಧಾನಿಯವರೇ ನಿಲ್ಸಿದ್ದಾರೆ. ಪ್ರಧಾನಿ ಬಂದಾಗ ರಾಜ್ಯಾಧ್ಯಕ್ಷರೇ ಬ್ಯಾರಿಕೇಡ್ ಹಿಂದೆ ನಿಂತಿದ್ದರು. ಪ್ರಧಾನಿ ಉತ್ತರ ಕೊಟ್ಟಿದ್ದನ್ನು ಜನರು ನೋಡಿದ್ದಾರೆ ಎಂದು ಮಧು ಬಂಗಾರಪ್ಪ ಟೀಕಿಸಿದರು.
ಇಲ್ಲೂ ರೈತರೇ, ಅಲ್ಲೂ ರೈತರೇ ಯಾರಿಗೂ ತೊಂದರೆಯಾಗಬಾರದು
ಕಾವೇರಿ ನೀರು ವಿಚಾರ ಕೋರ್ಟ್ ಅಂಗಳದಲ್ಲಿದೆ. ಈ ಸಂದರ್ಭದಲ್ಲಿ ತಂದೆ ಬಂಗಾರಪ್ಪರನ್ನು ನೆನಪು ಮಾಡಿಕೊಳ್ಳಬೇಕು. ಅಂದಿನ ಕೋರ್ಟ್ ರೂಲ್ಸ್ ಹಾಗೂ ಇಂದಿನ ಕೋರ್ಟ್ ರೂಲ್ಸ್ಗೆ ಬದಲಾವಣೆ ಅಗಿದೆ. ಕಾನೂನಿಗೆ ನಾವು ತಲೆ ಭಾಗಬೇಕಾಗುತ್ತದೆ. ಕಾನೂನು ಕೂಡ ನಮ್ಮ ವಸ್ತುಸ್ಥಿತಿ ಅಧರಿಸಿ, ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲೂ ರೈತರೇ, ಅಲ್ಲೂ ರೈತರೇ ಯಾರಿಗೂ ತೊಂದರೆಯಾಗಬಾರದು. ಆದರೆ ರಾಜ್ಯದ ರೈತರ ಹಿತ ಕಾಪಾಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದರು