ಸ್ಯಾಂಡಲ್ ವುಡ್ ನಟ ಶಿವರಾಜ್ ಕುಮಾರ್ ವಿರುದ್ಧ ನಿನ್ನೆಯಷ್ಟೇ ಪ್ರತಾಪ್ ಸಿಂಹ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಟ ಶಿವರಾಜ್ ಕುಮಾರ್ ಪ್ರಚಾರ ಮಾಡಿದರು ಎನ್ನುವ ಕಾರಣಕ್ಕಾಗಿ ಪುನೀತ್ ರಾಜ್ ಕುಮಾರ್ ಹೆಸರನ್ನೂ ಅವರು ಎಳೆತಂದಿದ್ದರು.
ಈ ನಡೆ ಡಾ.ರಾಜ್ ಕುಟುಂಬದ ಅಭಿಮಾನಿಗಳಿಗೆ ಬೇಸರ ತರಿಸಿತ್ತು. ಸ್ವತಃ ಶಿವರಾಜ್ ಕುಮಾರ್ ಕೂಡ ಪ್ರತಿಕ್ರಿಯಿಸಿದ್ದು, ಇದೀಗ ಪ್ರತಾಪ್ ಸಿಂಹ ಮಾತು ಬದಲಾಯಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ಪ್ರತಾಪ್ ಸಿಂಹ, ‘ನನಗೆ ಡಾ.ರಾಜ್ ಕುಮಾರ್ ಕುಟುಂಬದ ಬಗ್ಗೆ ಗೌರವವಿದೆ. ನಾನೂ ಕೂಡ ಶಿವರಾಜ್ ಕುಮಾರ್ ಅಭಿಮಾನಿ. ಅವರ ಕುಟುಂಬವನ್ನು ನಾವು ರಾಜಕೀಯ ಹೊರತಾಗಿ ನೋಡುತ್ತೇವೆ. ಶಿವಣ್ಣ ಕೂಡ ಅದಕ್ಕೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾಗಿ ಧನ್ಯವಾದಗಳನ್ನು ಹೇಳುತ್ತೇನೆ’ ಎಂದಿದ್ದಾರೆ.
ಇದೇ ವಿಷಯವಾಗಿ ಶಿವರಾಜ್ ಕುಮಾರ್ ಪರೋಕ್ಷವಾಗಿಯೇ ಅಸಮಾಧಾನ ಹೊರಹಾಕಿದ್ದರು. ‘ಪ್ರತಾಪ್ ಸಿಂಹ ಮತ್ತು ಸೋಮಣ್ಣ ಇಬ್ಬರೂ ನನ್ನ ಆತ್ಮೀಯರು. ಹಾಗೆ ಹೇಳಬಾರದಿತ್ತು. ಅಲ್ಲದೇ, ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವುದು ನನಗೆ ಗೊತ್ತೇ ಇರಲಿಲ್ಲ’ ಎಂದಿದ್ದರು.