ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ (Baba Siddique) ಅವರು 48 ವರ್ಷಗಳ ಬಳಿಕ ಇದೀಗ ದಿಢೀರ್ ಆಗಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.ಈ ಸಂಬಂಧ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಬರೆದುಕೊಂಡ ಅವರು, ನಾನು ಹದಿಹರೆಯದವನಾಗಿದ್ದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Congress) ಪಕ್ಷಕ್ಕೆ ಸೇರಿದ್ದೇನೆ. ಇದು 48 ವರ್ಷಗಳ ನನ್ನ ಮಹತ್ವದ ಪ್ರಯಾಣವಾಗಿದೆ. ಇಂದು ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ ಎಂದಿದ್ದಾರೆ. ನಾನು ಹೇಳಿಕೊಳ್ಳಲು ಬಹಳಷ್ಟು ಸಂಗತಿಗಳಿವೆ. ಆದರೆ ಕೆಲವೊಂದು ವಿಷಯಗಳನ್ನು ಹೇಳದೆ ಬಿಡುವುದು ಉತ್ತಮ. ಈ ಪ್ರಯಾಣದ ಭಾಗವಾಗಿರುವ ಎಲ್ಲರಿಗೂ ನಾನು ಧನ್ಯವಾದಗಳು ಎಂದು ಸಿದ್ದಿಕ್ ತಿಳಿಸಿದ್ದಾರೆ.
ಬಾಬಾ ಸಿದ್ದಿಕ್ ಯಾರು?: ಬಾಂದ್ರಾ (ವಂದ್ರೆ) ಪಶ್ಚಿಮ ಕ್ಷೇತ್ರದಿಂದ ಬಾಬಾ ಸಿದ್ದಿಕ್ ಮೂರು ಬಾರಿ ಶಾಸಕರಾಗಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ರಾಜ್ಯ ಸಚಿವರಾಗಿದ್ದರು ಮತ್ತು ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮುಂಬೈ ವಿಭಾಗದ ಅಧ್ಯಕ್ಷರಾಗಿದ್ದರು. ವಿದ್ಯಾರ್ಥಿ ನಾಯಕರಾಗಿ ನಾಯಕಕತ್ವ ಪ್ರಾರಂಭಿಸಿದ ಅವರು, ಮೊದಲು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಗೆ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ನಂತರ 1999, 2004 ಮತ್ತು 2009 ರಲ್ಲಿ ಬಾಂದ್ರಾ ಪಶ್ಚಿಮ ಕ್ಷೇತ್ರದಿಂದ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. 2014ರ ವಿಧಾನಸಭಾ ಚುನಾವಣೆಯಲ್ಲಿ ಮುಂಬೈ ಬಿಜೆಪಿ ಅಧ್ಯಕ್ಷ ಆಶಿಶ್ ಶೆಲಾರ್ ವಿರುದ್ಧ ಬಾಬಾ ಸಿದ್ದಿಕ್ ಪರಾಭವಗೊಂಡಿದ್ದರು. ಕಾಂಗ್ರೆಸ್ ನಾಯಕ ಬಾಬಾ ಸಿದ್ದಿಕ್ ಅವರು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಅಜಿತ್ ಪವಾರ್ ಬಣವನ್ನು ಸೇರುವ ನಿರೀಕ್ಷೆಯಿದೆ ಎಂದು ಎನ್ಸಿಪಿ ನಾಯಕರು ಕಳೆದ ವಾರ ಹೇಳಿದ್ದರು.