ಲಖನೌ: ರಾಜ್ಯದಲ್ಲಿನ ಕ್ರಿಮಿನಲ್ಗಳು ಮತ್ತು ಮಾಫಿಯಾ ವಿರುದ್ಧ ತಮ್ಮ ಸರ್ಕಾರದ ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಭಿವೃದ್ಧಿಯ ಹಾದಿಯಲ್ಲಿ ಯಾರೇ, ಯಾವುದೇ ರೀತಿಯ ಅಡ್ಡಿ ಉಂಟುಮಾಡಿದರೂ ಅವರ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಪಾಡ್ಕಾಸ್ಟ್ ಸಂದರ್ಶನದಲ್ಲಿ ಮಾತನಾಡಿದ ಯೋಗಿ, ರಾಜ್ಯದ ಅಭಿವೃದ್ಧಿಗೆ ಬುಲ್ಡೋಜರ್ ಮತ್ತು ಆಧುನಿಕ ಯಂತ್ರಗಳು ಅಗತ್ಯವಾಗಿವೆ ಎಂದು ಪ್ರತಿಪಾದಿಸಿದ್ದಾರೆ.
“ಉತ್ತರ ಪ್ರದೇಶದಂತಹ ಬೃಹತ್ ರಾಜ್ಯವು ತ್ವರಿತವಾಗಿ ಅಭಿವೃದ್ಧಿಯಾಗಬೇಕು ಎಂದರೆ, ಈ ಕಾಲಘಟ್ಟದಲ್ಲಿ ನಮಗೆ ಸಲಿಕೆ ಮತ್ತು ಗುದ್ದಲಿಗಳು ಬೇಕಿವೆಯೇ? ಈ ಮುಂಚೆ ಯಾವುದೇ ಕಾಮಗಾರಿಗೆ ಅನುಮೋದನೆ ದೊರೆತರೂ ಮಾಫಿಯಾ ಬಂದು ಅಕ್ರಮ ಆಸ್ತಿಯನ್ನು ಕಬಳಿಸುತ್ತಿತ್ತು. ಮಾಫಿಯಾ ವಿರುದ್ಧ ಕ್ರಮ ಕೈಗೊಳ್ಳಲು ಹಿಂದಿನ ಸರ್ಕಾರಕ್ಕೆ ಧೈರ್ಯವೇ ಇರಲಿಲ್ಲ” ಎಂದು ಯೋಗಿ ಟೀಕಿಸಿದ್ದಾರೆ.