ಚಿಕ್ಕೋಡಿ: ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ನಡುವಿನ ಶೀತಲ ಸಮರದ ವಿಚಾರವಾಗಿ ಸತೀಶ್ ಪರ ಸಹೋದರ ರಮೇಶ್ ಜಾರಕಿಹೊಳಿ (Ramesh Jarkiholi) ಬ್ಯಾಟ್ ಬೀಸಿದ್ದಾರೆ. ಅಥಣಿಯ ನಂದಗಾವ ಗ್ರಾಮದಲ್ಲಿ ಮಾತಾಡಿದ ಅವರು, ನಾನು ಬಂಡಾಯ ಎದ್ದಾಗ ಎಲ್ಲರೂ ನನ್ನನ್ನು ಬೈದಿದ್ದರು. ನಾನು ಯಾಕೆ ಬಂಡಾಯ ಎದ್ದಿದ್ದೆ ಎಂಬುದಕ್ಕೆ ಇಂದು ಉತ್ತರ ಸಿಕ್ಕಿದೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿರುವ ಕಾಲದಲ್ಲಿಯೇ ಸತೀಶ್ ಅವರಿಗೆ ಹಿಂಸೆ ಆಗುತ್ತಿದೆ. ಬೇರೆ ಯಾರಾದರೂ ಸಿಎಂ ಆಗಿದ್ದರೆ ಸತೀಶ್ ಅವರ ಪರಿಸ್ಥಿತಿ ಏನಾಗುತ್ತಿತ್ತು ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ಪರೋಕ್ಷವಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಮುಖ್ಯಮಂತ್ರಿ ಆಗಿದ್ದರೆ ಸತೀಶ್ ಅವರ ಪರಿಸ್ಥಿತಿಯ ಬಗ್ಗೆ ಅವರು ಹೇಳಿದ್ದಾರೆ.
ಹಿಂದೆ ಕೆಲವರು ನನ್ನ ಬಂಡಾಯವನ್ನು ವಿರೋಧಿಸಿದ್ದರು. ಅವತ್ತು ನಾನು ಬಂಡಾಯ ಎದ್ದಿದ್ದು, ಇಂದು ಜನರಿಗೆ ಅರ್ಥವಾಗಿದೆ. ಈಗ ಸತೀಶ್ ಜಾರಕಿಹೊಳಿ ಅವರ ನಡೆಯಿಂದ ಜನರಿಗೆ ಉತ್ತರ ಸಿಕ್ಕಿದೆ. ಸಿಎಂ ಸಿದ್ದರಾಮಯ್ಯನವರಿಗೆ ಫ್ರೀ ಹ್ಯಾಂಡ್ ಇಲ್ಲ. ಈ ಅವಧಿಯಲ್ಲಿ ಕೆಲವರು ಅವರನ್ನು ಕಟ್ಟಿ ಹಾಕಿದ್ದಾರೆ. 2013 ರಲ್ಲಿ ಇದ್ದ ಸಿದ್ದರಾಮಯ್ಯನವರು ಈಗಿಲ್ಲ, ಅವರ ಆ ಮಾತಿನ ದರ್ಪ ಹಾಗೂ ದಕ್ಷತೆ ಈಗ ಕಾಣುತ್ತಿಲ್ಲ. ಅವರು ಯಾಕೆ ಸೈಲೆಂಟ್ ಆಗಿದ್ದಾರೆಂದು ತಿಳಿಯುತ್ತಿಲ್ಲ ಎಂದಿದ್ದಾರೆ.