ಬೆಂಗಳೂರು;- ಹುಲಿಯುಗುರನ್ನು ಬಹಳ ಜನ ನೂರಾರು ವರ್ಷಗಳಿಂದ ರಾಜ್ಯಾದಾದ್ಯಂತ ಆಭರಣವಾಗಿ ಧರಿಸುತ್ತಿದ್ದದ್ದು ಹೊಸದೂ ಅಲ್ಲ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಅರಣ್ಯ ಇಲಾಖೆ ಅಧಿಕಾರಿಗಳು ಕಾಣದೆ ಇದ್ದದ್ದೂ ಅಲ್ಲ. ಈಗ ಸರ್ಕಾರದ ಆಡಳಿತಾತ್ಮಕ ವೈಫಲ್ಯ, ಬೋಗಸ್ ಭರವಸೆಗಳ ಮೇಲಿನ ಜನರ ಆಕ್ರೋಶ, ರೈತರಿಗೆ ವಿದ್ಯುತ್ ಪೂರೈಸಲಾಗದೆ ನೀಡಿದ ಕತ್ತಲೆ ಭಾಗ್ಯ, ಬರ ಪರಿಸ್ಥಿತಿ ನಿರ್ವಹಣೆಯಲ್ಲಿನ ವೈಫಲ್ಯ, ನಿಮ್ಮ ಸರಕಾರದ ಮಂತ್ರಿಗಳು ತೆರೆದ ನಕಲಿ ದಾಖಲೆಗಳ ಇಲಾಖೆ, ಶಾಸಕರು ಬಂಡಾಯದ ಬಸ್ ಹತ್ತುತ್ತಿರುವ ಬೇಗುದಿ ಮತ್ತು ಇವೆಲ್ಲಕ್ಕಿಂತ ಮುಖ್ಯವಾಗಿ ಪಂಚ ರಾಜ್ಯ ಚುನಾವಣೆಗೆ ನಡೆಸಿದ ಕಲೆಕ್ಷನ್ ಐಟಿ ಇಲಾಖೆ ಪಾಲಾಗಿ ಜನರ ಎದುರು ತಲೆಯೆತ್ತಿ ನಡೆಯಲಾಗದು ಎನ್ನುವ ಕಾರಣಕ್ಕೆ “ಹುಲಿಯುಗುರು” ಎಂಬ ಸದಾರಮೆ ನಾಟಕ ಆಡುತ್ತಿರುವುದು ಸ್ಪಷ್ಟ ಎಂದು ಕಟುವಾಗಿ ಟೀಕಿಸಿದ್ದಾರೆ.
ಒಮ್ಮೆ ನಿಮ್ಮ ಮಂತ್ರಿಮಂಡಲದ ಒಳಗೆ ಇಣುಕಿ ಅಲ್ಲಿ ಬಹಳಷ್ಟು ಜನ ಕಾಡು ಪ್ರಾಣಿಗಳನ್ನು ಬಂಧನದಲ್ಲಿರಿಸಿದವರು, ಕಾಡು ಪ್ರಾಣಿಗಳನ್ನು ಹತ್ಯೆ ಮಾಡಿದವರು ಸಿಗಬಹುದು. ಅಂತವರನ್ನು ಬಿಟ್ಟು ಹುಲಿಯುಗುರು ಧರಿಸಿದ್ದಾರೆ ಎನ್ನುವ ಕಾರಣಕ್ಕೆ ಕ್ರಮ ಕೈಗೊಳ್ಳಲು ಹೊರಟಿರುವುದು, ಅದರಲ್ಲೂ ಜನಸಾಮಾನ್ಯರಿಗೆ ನೇರ ಎಫ್ಎಸ್ಎಲ್ ವರದಿ ಬರುವುದಕ್ಕೆ ಮುಂಚೆಯೇ ಬಂಧನ , ಇನ್ನು ಸೆಲೆಬ್ರಿಟಿಗಳಿಗೆ ನೋಟಿಸ್ ಇದೆಲ್ಲವೂ ಈ ನಾಟಕದ ಭಾಗವಲ್ಲವೇ ?, ಇದು ನಿಮ್ಮ ಸರ್ಕಾರದ ಪ್ರಾಮಾಣಿಕತೆಯ ಬಗ್ಗೆ ಸಂಶಯ ಮೂಡಿಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ