ವಿಜಯನಗರ: ಜಿಲ್ಲೆಯ ಹೊಸಪೇಟೆತಾಲೂಕಿನ ವ್ಯಾಸನಕೇರಿ ರೈಲು ನಿಲ್ದಾಣದ ಸಮೀಪ ನಿನ್ನೆ ಸಾಯಂಕಾಲ ಗೂಡ್ಸ್ ರೈಲಿನ ಕೆಲ ಬೋಗಿಗಳು ಹಳಿತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಹಿನ್ನಲೆ ಹಲವು ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದ್ದು, ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಹಳಿಗಳಿಂದ ರೈಲು ತೆರವು ಕಾರ್ಯದ ನಿಮಿತ್ತ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಹೊಸಪೇಟೆ- ಹರಿಹರ ಪ್ಯಾಸೆಂಜರ್, ಹರಿಹರ- ಬಳ್ಳಾರಿ ಡೆಮೊ ಸ್ಪೆಷಿಯಲ್, ಬಳ್ಳಾರಿ – ಹೊಸಪೇಟೆ ಡೆಮೋ ಸ್ಪೆಷಿಯಲ್ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಇನ್ನುಳಿದಂತೆ ವಿಜಯಪುರ- ಯಶವಂತಪುರ ಮತ್ತು ಯಶವಂತಪುರ- ವಿಜಯಪುರ ಎಕ್ಸಪ್ರೆಸ್ ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಹೊಸಪೇಟೆ- ಕೊಟ್ಟೂರು ಮಾರ್ಗದ ಬದಲಾಗಿ ಹೊಸಪೇಟೆ, ಬಳ್ಳಾರಿ, ರಾಯದುರ್ಗ, ಚಿಕ್ಕಜಾಜೂರು ಮಾರ್ಗದಲ್ಲಿ ಸಂಚಾರಿಸಲಿವೆ.