ಬೆಂಗಳೂರು;- ಕಾರ್ ಪೂಲಿಂಗ್ ಬಗ್ಗೆ ಇನ್ನೂ 10 ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ನಗರದಲ್ಲಿ ಕಾರ್ಪೂಲಿಂಗ್ಗೆ ಅವಕಾಶ ನೀಡುವುದು ಅಥವಾ ಅನುಮತಿ ಹಿಂಪಡೆಯುವ ಕುರಿತು ಮುಂದಿನ ೧೦ ದಿನಗಳಲ್ಲಿ ನಿರ್ಧರಿಸಲಾಗುವುದು. ರಾಜ್ಯ ಸರ್ಕಾರ ಕಾರ್ ಪೂಲಿಂಗ್ ಸ್ಥಗಿತಗೊಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಕಾರ್ ಪೂಲಿಂಗ್ನಿಂದಾಗಿ ನಗರದ ಸಂಚಾರ ದಟ್ಟಣೆ ನಿಯಂತ್ರಿಸಬಹುದು ಹಾಗೂ ಮಾಲಿನ್ಯ ಕಡಿಮೆ ಮಾಡಬಹುದು. ಈವರೆಗೆ ಕಾರ್ ಪೂಲಿಂಗ್ ಸೇವೆಗಳಿಗೆ ಯಾವುದೇ ನಿಷೇಧ ಹೇರಿಲ್ಲ. ಆದರೂ ವೈಟ್ಬೋಡ್ ಹೊಂದಿರುವ ವಾಣಿಜ್ಯೇತರ ವಾಹನಗಳು ಕಾರ್ ಪೂಲಿಂಗ್ಗೆ ಬಳಸುವುದಕ್ಕೆ ನಿಯಂತ್ರಣ ಹೇರಬೇಕಿದ್ದು, ಈ ಬಗ್ಗೆ ಮುಂದಿನ ೧೦ ದಿನಗಳಲ್ಲಿ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರು, ಮುಂಬೈ ಇತ್ಯಾದಿ ನಗರಗಳಲ್ಲಿ ಕಾರ್ ಪೂಲಿಂಗ್ ಟ್ರೆಂಡ್ನಲ್ಲಿದೆ. ಅದರಲ್ಲೂ ನಿತ್ಯ ಕಚೇರಿಗಳಿಗೆ ಕಾರಿನಲ್ಲಿ ಹೋಗುವ ಉದ್ಯೋಗಿಗಳಲ್ಲಿ ಇದು ಜನಪ್ರಿಯವಾಗಿದೆ. ಒಂದು ಕಾರಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಹೋಗುವ ಬದಲು ಅದೇ ಮಾರ್ಗದಲ್ಲಿ ಇತರರನ್ನೂ ಜತೆಗೆ ಸೇರಿಸಿಕೊಂಡು ಕರೆದೊಯ್ಯಬಹುದು. ಇದರಿಂದ ರಸ್ತೆಗಿಳಿಯುವ ವಾಹನಗಳ ಸಂಖ್ಯೆ ಕಡಿಮೆ ಆಗುತ್ತದೆ, ಪೆಟ್ರೋಲ್ ವೆಚ್ಚ ತಗ್ಗುತ್ತದೆ. ಐಟಿ ವಲಯದಲ್ಲಿ ಈ ಕಾರ್ ಪೂಲಿಂಗ್ ಬಹಳ ಜನಪ್ರಿಯವಾಗಿದೆ.