ಚಿತ್ರದುರ್ಗ: ನಗರದ ಚಳ್ಳಕೆರೆ ಗೇಟ್ ಸಮೀಪವಿರುವ ಜಿಲ್ಲಾ ಕಾರಾಗೃಹ ರಸ್ತೆಯ ಪಾಳುಬಿದ್ದ ಮನೆಯಲ್ಲಿ ಐದು ಅಸ್ಥಿಪಂಜರಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಪವನ್ ಕುಮಾರ್ ಎಂಬುವರು ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಜಗನ್ನಾಥರೆಡ್ಡಿ ಸಂಬಂಧಿ ಪವನ್ ಕುಮಾರ್ ಮಾತನಾಡಿ ಜಗನ್ನಾಥರೆಡ್ಡಿ (80) ಮೂಲತಹ ದೊಡ್ಡ ಸಿದ್ದವನಹಳ್ಳಿಯ ನಿವಾಸಿಗಳಾಗಿದ್ದು, ನಿವೃತ್ತ ಇಂಜಿನಿಯರ್ ಆಗಿದ್ದರು.ಸುಮಾರು ವರ್ಷಗಳಿಂದ ಜಗನ್ನಾಥರೆಡ್ಡಿ ಕುಟುಂಬ ನಮ್ಮ ಸಂಪರ್ಕದಲ್ಲಿರಲಿಲ್ಲ.ಕೆಲ ವರ್ಷಗಳಿಂದ ಜಗನ್ನಾಥರೆಡ್ಡಿ ಮತ್ತು ಕುಟುಂಬದವರು ಕಂಡಿಲ್ಲ. ಮನೆಯಲ್ಲಿ ಪತ್ತೆ ಆಗಿರುವ ಅಸ್ಥಿಪಂಜರ ಅವರದ್ದೇ ಆಗಿರಬಹುದು. ಮೂರು ವರ್ಷದ ಹಿಂದೆಯೇ ಅವರು ಮನೆಯಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದ ಮನೆಯ ಕಡೆ ಯಾರು ಹೋಗುತ್ತಿರಲಿಲ್ಲ. ಇತ್ತೀಚೆಗೆ ಯಾರೋ ಕಳ್ಳರು ಮನೆ ಬಾಗಿಲು ಹೊಡೆದಿರುವುದು ಕಂಡುಬಂದಿದ್ದು, ನಂತರ ನಾಯಿಗಳು ತಲೆ ಬುರುಡೆಗಳನ್ನು ಹೊರಗೆ ಎಳೆದು ತಂದಿರಬಹುದು ಎನ್ನಲಾಗಿದ್ದು, ಅಲ್ಲದೆ, ಮನೆಯಲ್ಲಿ 2019ರ ಕ್ಯಾಲೆಂಡರ್ ಕಂಡು ಬಂದಿರುವುದರಿಂದ ಅದೇ ವರ್ಷದಲ್ಲಿ ಸಾವಿಗೀಡಾಗಿರಬಹುದು ಎನ್ನಲಾಗಿದೆ.
ಈ ಮನೆಯಲ್ಲಿ ಜಗನ್ನಾಥರೆಡ್ಡಿ, ಪತ್ನಿ ಪ್ರೇಮಕ್ಕ, ಪುತ್ರಿ ತ್ರಿವೇಣಿ, ಪುತ್ರ ಕೃಷ್ಣರೆಡ್ಡಿ, ನರೇಂದ್ರರೆಡ್ಡಿ ವಾಸವಾಗಿದ್ದರು ಎನ್ನಲಾಗಿದ್ದು, ಪವನ್ ಕುಮಾರ್ ದೂರನ್ನು ಆಧರಿಸಿ, ಸ್ಥಳಕ್ಕೆ ಡಿವೈಎಸ್ಪಿ ಪಿ.ಅನಿಲ್ ಕುಮಾರ್, ಸಿಪಿಐ ನಹೀಮ್ ಮಹಮ್ಮದ್, ಪಿಎಸ್ಐ ರಘು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ನಂತರವೇ ಕೊಲೆಯೂ? ಅಥವಾ ಆತ್ಮಹತ್ಯೆಯೊ? ಎಂಬುದು ತಿಳಿಯಲಿದೆ.