ಕೇಂದ್ರದ ಬರ ಅಧ್ಯಯನ ಕೇವಲ ರಾಜಕೀಯಕ್ಕಾಗಿ – ಸಿದ್ದರಾಮಯ್ಯ

ಬೆಂಗಳೂರು;- ಕೇಂದ್ರದ ಬರ ಅಧ್ಯಯನ ಕೇವಲ ರಾಜಕೀಯಕ್ಕಾಗಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಮಾತನಾಡಿದ ಅವರು,ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಅಧ್ಯಯನ ಮಾಡಿಕೊಳ್ಳಲಿ ನಮ್ಮ ಅಭ್ಯಂತರವೇನೂ ಇಲ್ಲ. ಅವರಿಗೆ ರಾಜ್ಯದ ಜನರು, ರೈತರ ಬಗ್ಗೆ ಕಾಳಜಿ ಇದ್ದರೆ ತಮ್ಮದೇ ಪಕ್ಷದ ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ರಾಜ್ಯಕ್ಕೆ ಸೂಕ್ತ ಬರ ಪರಿಹಾರದ ಹಣ ಕೊಡಿಸಲಿ ಎಂದರು.

ಬಿಜೆಪಿ ನಾಯಕರ ಬರ ಅಧ್ಯಯನ ಪ್ರವಾಸ ಕುರಿತ ಪ್ರಶ್ನೆಗೆ, ಈಗಾಗಲೇ ರಾಜ್ಯಕ್ಕೆ ಕೇಂದ್ರ ಸರ್ಕಾರದ ತಂಡ ಬಂದು ರಾಜ್ಯದಲ್ಲಿ ಬರ ಅಧ್ಯಯನ ನಡೆಸಿ ಹೋಗಿದೆ. ಆ ತಂಡ ಇನ್ನೂ ವರದಿ ಕೊಟ್ಟಿಲ್ಲ. ಈಗ ಮತ್ತೆ ತಾವೇ ಬೇರೆ ಬರ ಅಧ್ಯಯನಕ್ಕೆ ಮುಂದಾಗಿರುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬರ ಅಧ್ಯಯನ ತಂಡದ ವರದಿ ಕೊಡಿಸಿ ರಾಜ್ಯಕ್ಕೆ ಸೂಕ್ತ ಪರಿಹಾರದ ಹಣ ಬಿಡುಗಡೆ ಮಾಡಿಸಲಿ ಎಂದರು.

ರಾಜ್ಯದ ಬರ ಪರಿಸ್ಥಿತಿಯಿಂದ 33,700 ಕೋಟಿ ರು.ನಷ್ಟು ನಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರಕ್ಕೆ 17,900 ಕೋಟಿ ರು.ಗಳ ಬರ ಪರಿಹಾರ ಕೋರಲಾಗಿದೆ. ಆದರೆ, ಕೇಂದ್ರದಿಂದ ಇನ್ನೂ ಒಂದು ರುಪಾಯಿ ಪರಿಹಾರ ಬಂದಿಲ್ಲ. ಬರ ಪರಿಹಾರಕ್ಕೆ ಒತ್ತಾಯಿಸಲು ನಮ್ಮ ಮಂತ್ರಿಗಳಿಗೆ ಕೇಂದ್ರದ ಸಂಬಂಧ ಪಟ್ಟ ಸಚಿವರ ಭೇಟಿಗೆ ಹೋದರೆ ಸಮಯವನ್ನೇ ನೀಡಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ. ನಿಜವಾಗಲೂ ರಾಜ್ಯದ ಜನರು, ರೈತರ ಬಗ್ಗೆ ಕಾಳಜಿ ಇದ್ದರೆ ರಾಜ್ಯ ಬಿಜೆಪಿ ನಾಯಕರು ಕೇಂದ್ರದೊಂದಿಗೆ ಮಾತನಾಡಿ ಪರಿಹಾರ ಕೊಡಿಸಲಿ. ರಾಜ್ಯ 25 ಬಿಜೆಪಿ ಸಂಸದರು ಪ್ರಧಾನಿ ಮೋದಿ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಮಾತನಾಡಿ ಪರಿಹಾರ ಕೊಡಿಸುವ ಕೆಲಸವನ್ನು ಮೊದಲು ಮಾಡಲಿ ಎಂದರು.

Loading

Leave a Reply

Your email address will not be published. Required fields are marked *