ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಗುಮ್ಮಲಾಪುರ ಗ್ರಾನೈಟ್ ಕ್ವಾರಿ ಬಳಿಯ ಜಮೀನಿನಲ್ಲಿ ರೈತನ (Farmer) ಮೇಲೆ ಲಾರಿ ಹರಿಸಿ ಹತ್ಯೆ ಆರೋಪ ಕೇಳಿಬಂದಿದೆ. ಅಡ್ಡಗಲ್ಲ ಗ್ರಾಮದ ರಾಘವೇಂದ್ರ (35) ಮೃತ ರೈತ. ಜಮೀನಿನಲ್ಲಿ ಗ್ರಾನೈಟ್ ಲಾರಿ ಓಡಿಸದಂತೆ ತಡೆದಿದ್ದಕ್ಕೆ ಹತ್ಯೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಗುಮ್ಮಲಾಪುರ ಗ್ರಾನೈಟ್ ಕ್ವಾರಿ ಬಳಿಯ ಜಮೀನುಗಳಲ್ಲಿ ಲಾರಿಗಳ ಸಂಚಾರ ಮಿತಿ ಮೀರಿತ್ತು. ಹೀಗಾಗಿ ಜೂ.18ರಂದು ಜಮೀನಿನಲ್ಲಿ ಸಂಚರಿಸುತ್ತಿದ್ದ ಲಾರಿಗಳನ್ನು ರಾಘವೇಂದ್ರ ತಡೆದಿದ್ದರು. ಹೀಗಾಗಿ ಸಂಜೆ ಜಮೀನಿನಲ್ಲಿದ್ದ ರಾಘವೇಂದ್ರ ಅವರ ಮೇಲೆ ಹರಿ ಹರಿಸಲಾಗಿತ್ತು.
ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ರಾಘವೇಂದ್ರ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಘವೇಂದ್ರ ಸಾವನ್ನಪ್ಪಿದ್ದಾನೆ. ಮೃತ ರಾಘವೇಂದ್ರನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.
ಗ್ರಾನೈಟ್ ಮಾಫಿಯಾ ಜೊತೆ ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮತ್ತು ಆರ್.ಟಿ.ಒ ಸೇರಿದಂತೆ ಚಿಕ್ಕಬಳ್ಳಾಫುರ ಜಿಲ್ಲಾಡಳಿತದ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆದರೆ ಪೊಲೀಸರು ಐಪಿಸಿ ಸೆಕ್ಷನ್ 338 ರ ಅಡಿ ಸ್ವಾಭಾವಿಕ ಅಪಘಾತವೆಂದು ಎಫ್ಐಆರ್ ದಾಖಲಿಸಿದ್ದಾರೆ. ಮೃತ ರಾಘವೇಂದ್ರನ ತಂದೆ ಬೈಯಣ್ಣನಿಂದ ಸ್ವಾಭಾವಿಕ ಅಪಘಾತವೆಂದು ದೂರು ಬರೆಸಿಕೊಂಡ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಪೊಲೀಸರ ನಡೆ ಅನುಮಾನಕ್ಕೆ ಕಾರಣವಾಗಿದೆ. ಪೆರೇಸಂದ್ರ ಠಾಣೆ ಪೊಲೀಸರು ಆರೋಪಿ ಕ್ವಾರಿ ಮಾಲಿಕರ ಜೊತೆ ಶಾಮೀಲು ಆಗಿದ್ದಾರೆ ಎಂಬ ಆರೋಪವಿದೆ.