ಬೆಂಗಳೂರು ;- ರಾಜಧಾನಿ ಬೆಂಗಳೂರಿನ ಕೆಂಗೇರಿ ವ್ಯಾಪ್ತಿಯ ಕೋಣಸಂದ್ರ ಕೆರೆ ಬಳಿ ಯುವಕನ ಕೊಲೆ ನಡೆದಿದೆ. ಮೊಹಮ್ಮದ್ ತಾಹೀರ್ ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.
ಮೊದಲಿಗೆ ದುಷ್ಕರ್ಮಿಗಳು, ಯುವಕನನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದು, ಬಳಿಕ ಮೃತದೇಹ ಎಸೆದು ಹೋಗಿದ್ದಾರೆ.
ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ತಾಹಿರ್, ಚಾಮರಾಜಪೇಟೆಯ ಟಿಪ್ಪು ನಗರದ ನಿವಾಸಿಯಾಗಿರುವ ನ್ಯಾಮತ್ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆಯಾಗಿತ್ತು. ಜುಲೈ 10 ರಂದು ರಾತ್ರಿ 11 ಗಂಟೆಗೆ ಮನೆಯಲ್ಲಿದ್ದ ತಾಹೀರ್ಗೆ ನ್ಯಾಮತ್ ಹಾಗೂ ಆತನ ಸ್ನೇಹಿತರು ಕರೆ ಮಾಡಿ ಕರೆದಿದ್ದರು.
ಬಳಿಕ ನಾಯಂಡಹಳ್ಳಿ ಮೆಟ್ರೋ ನಿಲ್ದಾಣದ ಬಳಿಯಿಂದ ಇಬ್ಬರು ತಾಹೀರ್ನನ್ನು ಆಟೋದಲ್ಲಿ ಅಪಹರಿಸಿಕೊಂಡು ಕೆಂಗೇರಿ ಕಡೆಗೆ ಕರೆದುಕೊಂಡು ಹೋಗಿದ್ದರು. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ, ಆತನ ತಂದೆ ಸೈಯದ್ ಮೆಹಬೂಬ್ ಅವರು ತಾಹೀರ್ಗೆ ಕರೆ ಮಾಡಿದ್ದರು. ಆದರೆ ತಾಹೀರ್ ಫೋನ್ ರಿಸೀವ್ ಮಾಡಿರಲಿಲ್ಲ. ಬಳಿಕ ನ್ಯಾಮತ್ ಮನೆ ಬಳಿ ತೆರಳಿ ವಿಚಾರಿಸಿದ್ದರು.
ಈ ವೇಳೆ ಆರೋಪಿ ನ್ಯಾಮತ್ ತಂದೆ ನ್ಯಾಮತ್ಗೆ ಕರೆ ಮಾಡಿದಾಗ, ‘ತಾನು ಕೆಂಗೇರಿಯಲ್ಲಿರುವುದಾಗಿ, ತಾಹೀರ್ ಸಹ ತನ್ನೊಂದಿಗೆ ಇರುವುದಾಗಿ’ ಹೇಳಿದ್ದ. ಆಗ ನಿನ್ನೊಂದಿಗೆ ತಾಹೀರ್ನನ್ನು ಕರೆತರುವಂತೆ ಅವರು ಸೂಚಿಸಿದಾಗ ನ್ಯಾಮತ್ ಕಾಲ್ ಕಟ್ ಮಾಡಿದ್ದ. ಬಳಿಕ ತಾಹೀರ್ ಪೋಷಕರು ಕೆಂಗೇರಿ ಬಳಿ ಬಂದು ಹುಡುಕಾಟ ನಡೆಸಿದ್ದರು. ಆದರೆ ಅಲ್ಲಿ ತಾಹೀರ್ ಸಿಗದಿದ್ದಾಗ ವಾಪಸ್ ಮನೆಗೆ ಬಂದು ಚಂದ್ರಾಲೇಔಟ್ ಠಾಣೆಯಲ್ಲಿ ಮಗನ ಅಪಹರರಣದ ಬಗ್ಗೆ ದೂರು ನೀಡಿದ್ದರು.