ವಿಧಾನಸಭೆ: ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಪರ್ಯಾಲೋಚನೆ ವೇಳೆರ ಶಾಸಕ ಟಿ.ಬಿ. ಜಯಚಂದ್ರರನ್ನು ದೆಹಲಿಯಲ್ಲಿ ಸರ್ಕಾರದ ವಿಶೇಷ ಪ್ರತಿನಿಧಿ ಮಾಡಿರುವ ವಿಚಾರವಾಗಿ ಬಿಜೆಪಿ ಸದಸ್ಯರು ಸರ್ಕಾರದ ಕಾಲೆಳೆದರು. ಟಿ.ಬಿ. ಜಯಚಂದ್ರ ಹಿರಿಯರು, ಅವರ ಮೇಲೆ ನಮಗೆ ಗೌರವ ಇದೆ, ಅವರಿಗೆ ದೆಹಲಿಗೆ ಹೋಗಿ ಇರುವ ಶಿಕ್ಷೆ ಯಾಕೆ ಕೊಟ್ರಿ? ದೆಹಲಿಯಲ್ಲಿ ವಿಶೇಷ ಪ್ರತಿನಿಧಿ ಅಂದರೆ ಕರ್ನಾಟಕ ಭವನದಲ್ಲಿ ಒಂದು ಕಚೇರಿ ಮಾಡಿ ಸುಮ್ನೆ ಇರುವುದಷ್ಟೇ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಜಯಚಂದ್ರ ಅವರು ಕಾನೂನು ಸಲಹೆಗಾರರು, ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಇರಬೇಕಾದ ಅರ್ಹ ವ್ಯಕ್ತಿ, ಮಂತ್ರಿ ಸ್ಥಾನ ಕೊಡಕ್ಕಾಗಿಲ್ಲ ಅಂತ ಈ ಹುದ್ದೆ ಕೊಟ್ಟು ಕೂರಿಸಿರುವುದು ಸರಿಯಲ್ಲ ಎಂದು ಶಾಸಕ ಅರಗ ಜ್ಞಾನೇಂದ್ರ ಟಾಂಗ್ ಕೊಟ್ಟರು. ನಿನ್ನೆ ಸಿಎಂ ನಾನೇ ಸೀನಿಯರ್ ಎಂದು ಹೇಳಿದ್ದಾರೆ, ಜಯಚಂದ್ರ ಸೀನೀಯರ್, ಅವರು 1978 ರಲ್ಲಿ ಶಾಸಕರಾದವರು ಎಂದು ಬಸವರಾಜ ಬೊಮ್ಮಾಯಿ ಹೇಳಿದರು. ಇದೇ ವೇಳೆ ವಿಧಾನಮಂಡಲ ಅನರ್ಹತಾ ನಿವಾರಣಾ ತಿದ್ದುಪಡಿ ವಿಧೇಯಕ ಅಂಗೀಕಾರವಾಯಿತು.