ವಿಜಯನಗರ : ಕರಡಿಗಳ ದಾಳಿಯಿಂದ ರೈತನೋರ್ವ ಗಂಭೀರ ಗಾಯಗೊಂಡ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗುಂಡುಮುಣಗು ಗ್ರಾಮದ ಸಿದ್ದಾಪುರ ರಸ್ತೆಯಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಶರಣಯ್ಯ ಬಿಎಂ (60) ಎಂಬುವರು ಕರಡಿ ದಾಳಿಗೆ ಸಿಲುಕಿದ ರೈತ ಎಂದು ತಿಳಿದು ಬಂದಿದೆ. ಬೆಳ್ಳಂಬೆಳಗ್ಗೆ ಹೊಲಕ್ಕೆ ಹೋಗಿದ್ದಾಗ ರೈತನ ಮೇಲೆ ಕರಡಿ ಮತ್ತು ಮರಿ ಕರಡಿ ಒಮ್ಮೆಲೆ ದಾಳಿ ಮಾಡಿವೆ.
ರೈತನ ಮುಖಕ್ಕೆ ಹಿಗ್ಗಾಮುಗ್ಗಾ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ. ಭಯಾನಕ ದಾಳಿಗೆ ಶರಣಯ್ಯ ಅವರ ಮುಖ ಹಾಗೂ ಹಣೆಯ ಭಾಗವು ಕಿತ್ತು ಹೊರ ಬಂದಿದೆ. ಗಾಯಗೊಂಡ ರೈತನಿಗೆ ಚಿಕ್ಕಜೋಗಿಹಳ್ಳಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇತ್ತೀಚೆಗೆ ಕಾಡು ಪ್ರಾಣಿಗಳ ದಾಳಿ ಹೆಚ್ಚಿದ್ದು, ಅರಣ್ಯ ಇಲಾಖೆಯಿಂದ ಕಡಿವಾಣ ಹಾಕಬೇಕು ಎಂದು ರೈತರು ಆಗ್ರಹಿಸಿದ್ದಾರೆ