ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವ ಮತ್ತು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಭಯೋತ್ಪಾದಕ ಗುಂಪು ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (SIMI) ಮೇಲೆ ವಿಧಿಸಲಾದ ನಿಷೇಧವನ್ನು ಕೇಂದ್ರ ಸರ್ಕಾರ (Central Govt) 5 ವರ್ಷಗಳವರೆಗೆ ವಿಸ್ತರಿಸಿದೆ.
ಈ ಸಂಬಂಧ ಗೃಹ ಸಚಿವ ಅಮಿತ್ ಶಾ ತಮ್ಮ ಎಕ್ಸ್ನಲ್ಲಿ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿಯಲ್ಲಿ SIMIಯನ್ನು ಮತ್ತೆ ಮುಂದಿನ 5 ವರ್ಷಗಳ ಅವಧಿಗೆ ‘ಕಾನೂನುಬಾಹಿರ ಸಂಘʼ ಎಂದು ಘೋಷಿಸಲಾಗಿದೆ. ಭಾರತದ ಸಾರ್ವಭೌಮತೆ, ಭದ್ರತೆ ಮತ್ತು ಸಮಗ್ರತೆಗೆ ಧಕ್ಕೆ ತರಲು ಭಯೋತ್ಪಾದನೆಯನ್ನು ಉತ್ತೇಜಿಸುವಲ್ಲಿ, ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ತರುವಲ್ಲಿ ಸಿಮಿ ತೊಡಗಿಸಿಕೊಂಡಿದೆ ಎಂದು ಅಮಿತ್ ಶಾ (Amitshah) ತಿಳಿಸಿದ್ದಾರೆ.
ಗೃಹಸಚಿವಾಲಯದ ಅಧಿಸೂಚನೆಯಲ್ಲಿ ಏನಿದೆ?: SIMI ತನ್ನ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರಿಸಿದೆ ಮತ್ತು ಇನ್ನೂ ತಲೆಮರೆಸಿಕೊಂಡಿರುವ ತನ್ನ ಕಾರ್ಯಕರ್ತರನ್ನು ಪುನಃ ಸಂಘಟಿಸುವ ಪ್ರಯತ್ನ ಮಾಡುತ್ತಿದೆ. ಈ ಗುಂಪು ಕೋಮುವಾದ, ಸೌಹಾರ್ದತೆಯನ್ನು ಸೃಷ್ಟಿಸುವ ಮೂಲಕ ಜನರ ಮನಸ್ಸನ್ನು ಕದಡಿಸುವುದರ ಜೊತೆಗೆ ದೇಶ ವಿರೋಧಿ ಭಾವನೆಗಳನ್ನು ಹರಡುವ ಕೆಲಸ ಮಾಡುತ್ತಿದೆ. ಈ ಮೂಲಕ ಮತ್ತು ಉಗ್ರವಾದವನ್ನು ಬೆಂಬಲಿಸುವ ಮೂಲಕ ದೇಶದ ಸಮಗ್ರತೆ ಮತ್ತು ಭದ್ರತೆಗೆ ಹಾನಿಯುಂಟು ಮಾಡುವ ಚಟುವಟಿಕೆಗಳನ್ನು ಕೈಗೊಳ್ಳುತ್ತಿವೆ. ಹೀಗಾಗಿ ಸಿಮಿಯ ಮೇಲಿನ ನಿಷೇಧವನ್ನು ಮತ್ತೆ 5 ವರ್ಷ ಮುಂದುವರಿದಲಾಗುವುದು ಎಂದು ತಿಳಿಸಲಾಗಿದೆ.
2001 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಿಮಿಯನ್ನು ಮೊದಲು ನಿಷೇಧಿಸಲಾಯಿತು. ಅಂದಿನಿಂದ ಪ್ರತಿ 5 ವರ್ಷಗಳಿಗೊಮ್ಮೆ ನಿಷೇಧವನ್ನು ವಿಸ್ತರಿಸುತ್ತಾ ಬರಲಾಗಿದೆ. 2014ರ ಫೆಬ್ರವರಿ 1ರಂದು ಸಿಮಿ ಸಂಘಟನೆಯನ್ನು ನಿಷೇಧಿಸಲಾಯಿತು. ನಂತರ ಈ ನಿಷೇಧವನ್ನು 2019ರವರೆಗೆ ವಿಸ್ತರಿಸಲಾಗಿತ್ತು. ಇದೀಗ ಈ ಸಂಘಟನೆಯನ್ನು ಮತ್ತೆ ಐದು ವರ್ಷಗಳ ಕಾಲ ಯುಎಪಿಎ ಅಡಿಯಲ್ಲಿ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ.
ಸಿಮಿಯ ಗುರಿಯೇನು..?: ಭಾರತವನ್ನು ಇಸ್ಲಾಮಿಕ್ ಭೂಮಿಯಾಗಿ ಪರಿವರ್ತಿಸುವ ಮೂಲಕ ವಿಮೋಚನೆ ನೀಡುವುದು. ದಾರ್-ಉಲ್-ಇಸ್ಲಾಂ ಅಂದರೆ ಬಲವಂತವಾಗಿ ಅಥವಾ ಹಿಂಸೆಯ ಮೂಲಕ ಇಸ್ಲಾಂಗೆ ಮತಾಂತರಿಸುವುದಾಗಿದೆ.