ಬೆಂಗಳೂರು: ಅತ್ತಿಬೆಲೆ ಪಟಾಕಿ ದುರಂತದಲ್ಲಿ (Attibele Fire Incident) 16 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರಿಯಲ್ ವಿಚಾರಣೆಗೆ (Magisterial Inquiry) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹಿರಿಯ ಐಎಎಸ್ ಅಧಿಕಾರಿ ಹಾಗೂ ಬೆಂಗಳೂರು (Bengaluru) ಪ್ರಾದೇಶಿಕ ಆಯುಕ್ತ ಆದಿತ್ಯ ಅಮಲನ್ ಬಿಸ್ವಾಸ್ ನೇತೃತ್ವದಲ್ಲಿ ಮ್ಯಾಜಿಸ್ಟ್ರಿಯಲ್ ವಿಚಾರಣೆ ನಡೆಯಲಿದೆ. 3 ತಿಂಗಳಲ್ಲಿ ವರದಿ ನೀಡಲು ಗಡುವು ನೀಡಲಾಗಿದೆ.
ಏನಿದು ಪ್ರಕರಣ?
ರಾಜಧಾನಿ ಬೆಂಗಳೂರಿನ ಹೊರವಲಯದ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮಿನಲ್ಲಿ ಈಚೆಗೆ ಸಂಭವಿಸಿದ ಬೆಂಕಿ ದುರಂತದಲ್ಲಿ 16 ಮಂದಿ ಕಾರ್ಮಿಕರು ದಾರುಣ ಸಾವಿಗೀಡಾಗಿದ್ದರು.ತಮಿಳುನಾಡಿನ ಶಿವಕಾಶಿಯಿಂದ ಬಂದ ಲಾರಿಯಿಂದ ಪಟಾಕಿಗಳನ್ನು ಗೋದಾಮಿನಲ್ಲಿ ದಾಸ್ತಾನು ಮಾಡುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿತು. ತಕ್ಷಣ ಎಲ್ಲ ದಿಕ್ಕುಗಳಲ್ಲೂ ಪಟಾಕಿಗಳು ಸಿಡಿಯಲು ಆರಂಭಿಸಿದ ಕಾರಣ ಬೆಂಕಿ ನಂದಿಸಲು ಸಾಧ್ಯವಾಗಲಿಲ್ಲ. ದುರಂತದಲ್ಲಿ 16 ಮಂದಿ ಕಾರ್ಮಿಕರು ತಮ್ಮ ಪ್ರಾಣ ಕಳೆದುಕೊಂಡರು. ಅವಘಡದಲ್ಲಿ ಸುಮಾರು 5 ಕೋಟಿ ರೂ. ಮೌಲ್ಯದ ಪಟಾಕಿ ಭಸ್ಮವಾಗಿವೆ ಎಂದು ಅಂದಾಜಿಸಲಾಗಿದೆ. ಲಾರಿ, ಸರಕು ಸಾಗಣೆ ವಾಹನ, ನಾಲ್ಕು ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಗಡಿ ಮಾಲೀಕ ಮತ್ತು ಆತನ ಮಗನನ್ನು ಬಂಧಿಸಲಾಗಿದೆ.