ಬೆಂಗಳೂರು : ಕಾಂಗ್ರೆಸ್ ಚುನಾವಣೆಗೂ ಮುನ್ನ ನೀಡಿದ್ದ ಗ್ಯಾರಂಟಿಗಳಿಗೆ ಈಗ ಷರತ್ತುಗಳು ಅನ್ವಯ ಎಂಬಂತೆ ನಡೆದುಕೊಳ್ಳುತ್ತಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಚುನಾವಣೆಗೂ ಮುನ್ನ ಕಾಂಗ್ರೆಸ್ ಭರಪೂರ ಗ್ಯಾರಂಟಿಗಳ ನೀಡಿತ್ತು.
ಆದರೆ ಈಗ ಪ್ರತಿಯೊಂದಕ್ಕೂ ‘ಷರತ್ತುಗಳು ಅನ್ವಯ’ ಎಂಬಂತೆ ನಡೆದುಕೊಳ್ಳುತ್ತಿದೆ. ಜನಾಧಿಕಾರ ನೀಡಿದ್ದು ಷರತ್ತುಗಳ ಮೇಲೆ ಸರ್ಕಾರ ನಡೆಸುವುದಕ್ಕಲ್ಲ ಎಂಬುದನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಅರಿತುಕೊಳ್ಳಬೇಕು ಎಂದು ಕಿಡಿಕಾರಿದೆ.
ರಾಜ್ಯದ ಇತಿಹಾಸದಲ್ಲೇ ಅತಿಹೆಚ್ಚು ಸಾಲ ಮಾಡಿ ಅದರ ಹೊಣೆಯನ್ನು ಮುಂದಿನ ಸರ್ಕಾರಗಳ ಹೆಗಲಿಗೆ ಹಾಕಿದ ಅಪಕೀರ್ತಿ ಸಿದ್ದರಾಮಯ್ಯರದ್ದು, ಈಗಿನ ಗ್ಯಾರಂಟಿಗಳೂ ಜನರ ಒಂದು ಜೇಬಿನಿಂದ ತೆಗೆದು ಇನ್ನೊಂದು ಜೇಬಿಗೆ ಹಾಕುವ ನಾಟಕ. ಅದರಲ್ಲೂ ಸೋರಿಕೆಯಾಗಿ ಕಾಂಗ್ರೆಸ್ಸಿಗರ ಜೇಬುಗಳು ತುಂಬಿ ತುಳುಕಲಿರುವುದು ಇವರ ಗ್ಯಾರಂಟಿಯ ಅಸಲೀಯತ್ತು ಎಂದು ಹೇಳಿದೆ.