ದೊಡ್ಡಬಳ್ಳಾಪುರ: ಭಾರತ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್ ರಾಹುಲ್ ದಂಪತಿ ಶನಿವಾರ ಇಲ್ಲಿನ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದರು. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಹಿನ್ನೆಲೆಯಲ್ಲಿ ಇಂದು ಪಾಕಿಸ್ತಾನ-ಭಾರತ ತಂಡದ ಮಧ್ಯೆ ಮಧ್ಯಾಹ್ನ 3ಕ್ಕೆ ಪಂದ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕೆ.ಎಲ್. ರಾಹುಲ್ ಭೇಟಿ ಮಹತ್ವ ಪಡೆದಿದೆ.
ಇದಲ್ಲದೇ ಶ್ರಾವಣ ಮಾಸದ ಮೂರನೇ ಶನಿವಾರವಾದ ಇಂದು ಅತಿ ಹೆಚ್ಚಿನ ಭಕ್ತರು ದೇವಾಲಯಕ್ಕೆ ಬರುತ್ತಿದ್ದಾರೆ. ಕೆ.ಎಲ್.ರಾಹುಲ್ ಹಾಗೂ ಪತ್ನಿ ಅಥಿಯಾ ಶೆಟ್ಟಿ ಅವರಿಗೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.