ಬೆಂಗಳೂರು;- ನಗರದಲ್ಲಿ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿಯನ್ನು ಹತ್ತು ವರ್ಷದ ಬಳಿಕ ಈಗ ಪೊಲೀಸರು ಬಂಧಿಸಿದ್ದಾರೆ.
ಚಿನ್ನ ಖರೀದಿಸುವ ನೆಪದಲ್ಲಿ ಜ್ಯುವೆಲರಿ ಶಾಪ್ಗಳಿಗೆ ಎಂಟ್ರಿ ಕೊಡುವ ಈ ಖತರ್ನಾಕ್ ಲೇಡಿ ಜೋಡಿ ಮಾಲೀಕನಿಗೆ ತಿಳಿಯದ ಹಾಗೆ ಚಿನ್ನ ಕದ್ದು ಪರಾರಿಯಾಗುತ್ತಿದ್ದರು.
ಕೆಲವೇ ನಿಮಿಷದಲ್ಲಿ ಚಿನ್ನದ ವಸ್ತುಗಳನ್ನು ಕದಿಯುತ್ತಿದ್ದ ಗ್ಯಾಂಗನ್ನು ಸದ್ಯ ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ಈ ಜೋಡಿ ಹತ್ತು ವರ್ಷದ ಬಳಿಕ ಮತ್ತೆ ಸದ್ದು ಮಾಡಿ ಈಗ ಸಿಕ್ಕಿ ಬಿದ್ದಿದೆ. ರತ್ನ ಪೆರುಮಾಳ್ ಹಾಗೂ ಕೃಷ್ಣವೇಣಿ ಬಂಧಿತ ಆರೋಪಿಗಳು. ಇವರು ಬೆಂಗಳೂರಿನ ಚಿನ್ನದ ಅಂಗಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು.
ಬಂಧಿತ ಮಹಿಳೆಯರು, ನಕಲಿ ಚಿನ್ನದೊಂದಿಗೆ ಚಿನ್ನದ ಅಂಗಡಿಗಳಿಗೆ ಎಂಟ್ರಿ ಕೊಡುತ್ತಿದ್ದರು. ಮಾಲೀಕರ ಗಮನ ಬೇರೆಡೆ ಸೆಳೆದು ನಕಲಿ ಚಿನ್ನವನ್ನಿಟ್ಟು ಅಸಲಿ ಚಿನ್ನದೊಂದಿಗೆ ಎಸ್ಕೇಪ್ ಆಗುತ್ತಿದ್ದರು. ತಮಿಳುನಾಡು ಮೂಲದವರಾದ ಈ ಮಹಿಳೆಯರು ಬೆಂಗಳೂರಿನ ಹಲವೆಡೆ ತಮ್ಮ ಕೈಚಳಕ ತೋರಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೇವಸ್ಥಾನ, ಸಭೆ-ಸಮಾರಂಭಗಳಲ್ಲೂ ಈ ಆರೋಪಿಗಳು ಕೈಚಳಕ ತೋರಿಸಿದ್ದಾಋಎ. ಬನಶಂಕರಿ ಟೆಂಪಲ್ ಸೇರಿದಂತೆ ಹಲವು ಕಡೆ ಭಕ್ತರಿಗೆ ಗೊತ್ತಾಗದ ಹಾಗೆ ಚಿನ್ನ ಎಗರಿಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳ ಗಮನ ಬೇರೆಡೆ ಸೆಳೆದು ಸರಗಳ್ಳತನ ಮಾಡಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಅನೇಕ ರಾಜ್ಯಗಳಲ್ಲೂ ತಮ್ಮ ಕೈಚಳಕ ತೋರಿಸಿರುವ ಖ್ಯಾತಿ ಈ ಆರೋಪಿಗಳಿಗೆ ಸಲ್ಲುತ್ತದೆ. ಈಗಲೂ ಹಲವು ಪೊಲೀಸ್ ಠಾಣೆಗಳಿಗೆ ಬೇಕಾಗಿರುವ ಈ ಆರೋಪಿಗಳು, ಬರೊಬ್ಬರಿ 10 ವರ್ಷಗಳ ನಂತರ ಬೆಂಗಳೂರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಇವರು ಒಮ್ಮೆ ಕದ್ದು ಎಸ್ಕೇಪ್ ಆದ್ರೆ ಮತ್ತೆ ತಿಂಗಳಾನುಗಟ್ಟಲೇ ಕಳ್ಳತನ ಮಾಡುತ್ತಿರಲಿಲ್ಲ. ಬದಲಿಗೆ ಬೇರೆ ರಾಜ್ಯಕ್ಕೆ ಹೋಗಿ ತಮ್ಮ ಕೈಚಳಕ ತೋರಿಸುತ್ತಿದ್ದರು.