ಬೆಂಗಳೂರು: ಸರ್ಕಾರ ಬರುವ ಸಂದರ್ಭದಲ್ಲಿ 136 ಸ್ಥಾನ ಬರುತ್ತದೆ ಎಂದಿದ್ದೆ. ಆಗ ನನ್ನನ್ನು ಬಹಳಷ್ಟು ಜನ ಮೆಂಟಲ್ ಆಗಿದ್ದಾನೆ ಎಂದು ಲೇವಡಿ ಮಾಡಿದ್ದರು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಳೆಯ ವಿಷಯವನ್ನು ಮೆಲುಕು ಹಾಕಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ 82ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವರು ನಾವೇ ಸರ್ಕಾರ ಮಾಡುತ್ತೇವೆ ಎಂದು ಹೇಳಿ ಕೆಲವರ ಕಾಲಿಗೆ ಬಿದ್ದಿದ್ದರು.
ಅವರ ಹೆಸರು ಹೇಳುವುದಕ್ಕೆ ನಾನು ಇಷ್ಟಪಡುವುದಿಲ್ಲ. ಸಮ್ಮಿಶ್ರ ಸರ್ಕಾರ ಮಾಡುತ್ತೇವೆ ಎಂದು ಬರೆದುಕೊಂಡಿದ್ದರು. ಆದರೆ ನಾನು ಮಾತ್ರ 136ಕ್ಕೆ ಸ್ಟಿಕ್ ಆಗಿದ್ದೆ ಎಂದರು
ಕ್ವಿಟ್ ಇಂಡಿಯಾ ಚಳುವಳಿ ಮಾದರಿಯೇ ಈಗ ಅಗತ್ಯವಿದೆ. ಅಂದು ಬ್ರಿಟಿಷರ ವಿರುದ್ದ ನಾವು ಹೋರಾಟ ಮಾಡಿದ್ದೆವು. ಇಂದು ಕೋಮುವಾದ, ಸರ್ವಾಧಿಕಾರ ವಿರುದ್ದ ನಾವು ಹೋರಾಟ ಮಾಡಬೇಕಾಗಿದೆ. ಇಂಡಿಯಾ ರಕ್ಷಿಸಿ ಅಂತ ಎಲ್ಲ ರಾಷ್ಟ್ರೀಯ ನಾಯಕರು ಇಂಡಿಯಾ ಸಭೆಗೆ ಬಂದರು. ಬಿಜೆಪಿ ಭಾರತದಿಂದ ಬಿಟ್ಟು ತೊಲಗಲಿ ಅಂತ ಕಾರ್ಯಕ್ರಮ ಮಾಡಬೇಕು. ಕಾಂಗ್ರೆಸ್ ಮುಕ್ತ ಭಾರತ ಅಂತ ಅವರು ಹೇಳುತ್ತಿದ್ದರು. ನಾವು ಈಗ ಬಿಜೆಪಿ ಮುಕ್ತ ಭಾರತ ಮಾಡಬೇಕಾಗಿದೆ ಎಂದು ವಾಗ್ದಾಳಿ ನಡೆಸಿದರು.