ಬೆಂಗಳೂರು ;- ನಾನು ಯಾರಿಗೂ ವಿಧ್ವಂಸಕ ಕೃತ್ಯವೆಸಗಲು ಹೇಳಿಲ್ಲ ಎಂದು ಸಿಸಿಬಿ ವಿಚಾರಣೆ ವೇಳೆ ಶಂಕಿತ ಉಗ್ರ ಟಿ.ನಜೀರ್ ಹೇಳಿಕೆ ನೀಡಿದ್ದಾರೆ.
ಸ್ಫೋಟದ ಸಂಚಿನ ಪ್ರಕರಣ ಪ್ರಮುಖ ಆರೋಪಿ ಟಿ. ನಜೀರ್, 20 ತಿಂಗಳು ಕಾಲ ಜೈಲಿನಲ್ಲಿರುವಾಗ ಉಗ್ರ ಕೃತ್ಯವೆಸಗಲು ಶಂಕಿತರಿಗೆ ಬ್ರೈನ್ ವಾಶ್ ಮಾಡಿದ್ದ ಎಂಬುದರ ಬಗ್ಗೆ ಸಿಸಿಬಿ ತನಿಖೆ ವೇಳೆ ಕಂಡುಬಂದಿತ್ತು.
ಶಂಕಿತರ ಹೇಳಿಕೆ ಆಧರಿಸಿ ಸೆಂಟ್ರಲ್ ಜೈಲಿನಲ್ಲಿದ್ದ ಟಿ. ನಜೀರ್ನನ್ನು ಬಾಡಿ ವಾರೆಂಟ್ ಪಡೆದು ಸಿಸಿಬಿ ತೀವ್ರ ವಿಚಾರಣೆಗೊಳಪಡಿಸಿತ್ತು. ಧರ್ಮ ರಕ್ಷಣೆ ಬಗ್ಗೆ ಸಹ ಕೈದಿಗಳಿಗೆ ಪ್ರವಚನ ಮಾಡಿದ್ದೆ. ಬಾಂಬ್ ಸ್ಫೋಟವಾಗಲಿ, ಗ್ರೆನೇಡ್ ಹಾಗೂ ಗನ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾನೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಜೈಲಿನಲ್ಲಿರುವಾಗ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೊಹಮ್ಮದ್ ಜುನೈದ್ ಸೇರಿ ಹಲವರಿಗೆ ಧರ್ಮ ರಕ್ಷಣೆ ಮಾಡಬೇಕು ಎಂದು ಪ್ರವಚನ ಕೊಟ್ಟಿದ್ದೆ. ಧರ್ಮವನ್ನ ಉಳಿಸಿ ಬೆಳೆಸಬೇಕು ಎಂದು ಪ್ರೇರಣೆ ನೀಡಿದ್ದೆ. ಎಲ್ಲಿಯೂ ವಿಧ್ವಂಸಕ ಕೃತ್ಯವೆಸಗುವಂತೆ ಹೇಳಿಲ್ಲ. ಜೈಲಿನಿಂದ ಹೊರಬಂದ ಬಳಿಕ ಒಳ್ಳೆಯವನಾಗಿ ಬದುಕಬೇಕು ಎಂದುಕೊಂಡಿದ್ದೇನೆ ಎಂದು ಸಿಸಿಬಿ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸಿರುವುದಾಗಿ ತಿಳಿದುಬಂದಿದೆ.
ಜೈಲಿನಲ್ಲಿರುವಾಗ ಮೊಬೈಲ್ ಬಳಕೆ ಮಾಡಿರುವುದಾಗಿ ಒಪ್ಪಿಕೊಂಡಿರುವ ನಜೀರ್, ತನಿಖಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಮೊಬೈಲ್ ಬಳಸಿರುವುದು ಗೊತ್ತಾಗುತ್ತಿದ್ದಂತೆ ಜೈಲಿನ ಅಧಿಕಾರಿಗಳು ಸರ್ಚ್ ಮಾಡಿದ್ದಾರೆ. ಜೊತೆಗೆ ಸಿಸಿಬಿ ಅಧಿಕಾರಿಗಳು ಸಹ ಜೈಲಿಗೆ ತೆರಳಿ ಮಹಜರು ಮಾಡಲಿದ್ದಾರೆ. ನಜೀರ್ ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ