ನವದೆಹಲಿ: ಮಣಿಪುರ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಒಳಗೊಳ್ಳುವಿಕೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ವಿವಿಧ ದಂಗೆಕೋರ ಗುಂಪುಗಳಿಗೆ ಚೀನಾ ನೆರವು ನೀಡಿರುವ ಸಾಧ್ಯತೆ ಇದೆ ಎಂದು ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾಣೆ ಹೇಳಿದ್ದಾರೆ.
ಇಂಟರ್ನ್ಯಾಶನಲ್ ಸೆಂಟರ್ನಲ್ಲಿ `ರಾಷ್ಟ್ರೀಯ ಭದ್ರತಾ ದೃಷ್ಟಿಕೋನ’ ವಿಷಯದ ಕುರಿತು ಸಂವಾದ ನಡೆಸಿದರು. ಈ ವೇಳೆ ಅವರು ಜನಾಂಗೀಯ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ. ಗಡಿ ರಾಜ್ಯಗಳಲ್ಲಿನ ಅಸ್ಥಿರತೆಯು ದೇಶದ ಒಟ್ಟಾರೆ ರಾಷ್ಟ್ರೀಯ ಭದ್ರತೆಗೆ ತೊಡಕಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮತ್ತು ಸಂಬಂಧಿಸಿದ ಎಲ್ಲಾ ವ್ಯಕ್ತಿಗಳು ಅಗತ್ಯವಾದ ಕೆಲಸ ಮಾಡುತ್ತಿದ್ದಾರೆ ಎಂದು ನನಗೆ ಖಾತ್ರಿ ಇದೆ. ವಿದೇಶಿ ಹಸ್ತಕ್ಷೇಪದ ಬಗ್ಗೆ ನಾನು ಮಾತನಾಡುವುದಿಲ್ಲ, ಹಾಗೆಂದು ಅದನ್ನು ನಿರಾಕರಿಸುತ್ತಿಲ್ಲ. ದಂಗೆಕೋರರ ಗುಂಪುಗಳಿಗೆ ಖಂಡಿತವಾಗಿ ಚೀನಾ ನೆರವು ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಚೀನಾದ ನೆರವು ಈ ಗುಂಪುಗಳಿಗೆ ಹಲವು ವರ್ಷಗಳಿಂದ ಸಹಾಯ ಮಾಡುತ್ತಿದೆ. ಈಗಲೂ ಅದನ್ನು ಮುಂದುವರಿಸುತ್ತಿದೆ. ಮಣಿಪುರದಲ್ಲಿ ಮಾದಕವಸ್ತು ಕಳ್ಳಸಾಗಣೆ ಬಹಳ ಹಿಂದಿನಿಂದಲೂ ಇದೆ. ಇತ್ತಿಚೀನ ವರ್ಷಗಳಲ್ಲಿ ಅದು ಹೆಚ್ಚಾಗಿದೆ. ಎಲ್ಲಾ ಪ್ರಯತ್ನಗಳ ನಡುವೆ ನಾವು ಈ ಹಿಂಸಾಚಾರದ ನಿರಂತರತೆಯನ್ನು ನೋಡುತ್ತಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ.