ಕೊಪ್ಪಳ: ಬಿಜೆಪಿಯವರಿಗೆ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡೋಕ್ಕಾಗಿಲ್ಲ. ಆದರೆ ಅಂಜನಾದ್ರಿ ಹೆಸರಿನಲ್ಲಿ ರಾಜಕೀಯ ಮಾಡಿದರು. ಬಿಜೆಪಿಯವರು ಪ್ರತಿ ವಿಚಾರದಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಕೆಆರ್ಪಿಪಿ ಶಾಸಕ ಜನಾರ್ದನ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕೇವಲ ಬಾಯಿ ಮಾತಿಗೆ ಹಿಂದುತ್ವ ಅಂದರೆ ಸಾಲದು. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ನೀವು ಏನ್ ಮಾಡಿದ್ದೀರಿ ಎಂದು ಪ್ರಶ್ನಿಸಿದರು. ಸಿಎಂ ಸಿದ್ಧರಾಮಯ್ಯ ಭೇಟಿಯಾಗಿ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದ್ದೇನೆ. ಅಭಿವೃದ್ಧಿ ಮಾಡುವುದಕ್ಕೆ ನಿಮಗೆ ಅವಕಾಶವಿದೆ ಅಂತಾ ಹೇಳಿದ್ದೇನೆ. ಈಗಾಗಲೇ 120 ಕೋಟಿ ಅನುದಾನ ಮೀಸಲಿದೆ ಎಂದರು.
ಹಲವಾರು ಉದ್ಯಮಿಗಳ ಜತೆ ಮಾತನಾಡಿ ಅಯೋಧ್ಯೆ, ತಿರುಪತಿ ಮಾದರಿಯಲ್ಲಿ ಅಂಜನಾದ್ರಿ ಬೆಟ್ಟ ಅಭಿವೃದ್ಧಿ ಮಾಡುತ್ತೇನೆ. ಆಗಸ್ಟ್ನಲ್ಲಿ ದೇಶದ ಪ್ರಮುಖ ವಾಸ್ತು ಶಿಲ್ಪಿಗಳನ್ನ ಕರೆಸಲಾಗುವುದು. ಪರಿಸರಕ್ಕೆ ಯಾವುದೇ ರೀತಿ ಹಾನಿಯಾಗದೇ ಅಭಿವೃದ್ಧಿಪಡಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿಯವರ ಬಳಿಯೂ ಹೋಗಿ ಅಭಿವೃದ್ಧಿಗೆ ಹಣ ತರುತ್ತೇನೆ ಎಂದು ಹೇಳಿದರು. ನಮ್ಮ ತುಂಗಭದ್ರಾ ಡ್ಯಾಂನಲ್ಲಿ ಈಗಾಗಲೆ ಸಾಕಷ್ಟು ನೀರು ಬಂದಿದೆ. 30 ಟಿಎಂಸಿ ನೀರು ಇದ್ದರೆ, ನೀರು ಬಿಡುವುದಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ತಂಗಡಗಿಗವರು ಮೀಟಿಂಗ್ ಮಾಡುತ್ತೇವೆ ಅಂತಾರೆ. ಬಹುಶಃ ಅವರಿಗೆ ಮಾಹಿತಿ ಕೊರತೆ ಇರಬಹುದು ಎಂದು ತಿಳಿಸಿದರು.