ನವದೆಹಲಿ: ಮುಂದಿನ ವರ್ಷದ ಜನವರಿ 22 ರಂದು ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾನ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನಿ ಮೋದಿ ನೆರವೇರಿಸಲಿದ್ದಾರೆ. ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ರಾಮಲಲ್ಲಾ ಮೂರ್ತಿಯನ್ನು ರಚಿಸಿದ್ದು ಈಗಾಗಲೇ ಅವರು ಅಯೋಧ್ಯೆಯಲ್ಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅಯೋಧ್ಯೆ ಪ್ರವೇಶ ದ್ವಾರ ರಾಮ ಮಂದಿರ ಮಾದರಿಯಲ್ಲಿ ನಿರ್ಮಾಣವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ 28ರ ದ್ವಾರಕ್ಕೆ ʼಶ್ರೀ ರಾಮ ದ್ವಾರʼ ಎಂದು ಹೆಸರನ್ನು ಇಡಲು ಯೋಗಿ ಸರ್ಕಾರ ನಿರ್ಧಾರ ಕೈಗೊಂಡಿದೆ.
ಅಯೋಧ್ಯೆಯಲ್ಲಿ ರಾಮಮಂದಿರದ ಮೊದಲ ಹಂತದ ನಿರ್ಮಾಣ ಕಾರ್ಯ ಡಿಸೆಂಬರ್ 30ರೊಳಗೆ ಪೂರ್ಣಗೊಳ್ಳಲಿದ್ದು, ದರ್ಶನ ಮಾಡಲು ಭಕ್ತರಿಗೆ ಅನುವು ಮಾಡಿಕೊಡಲಾಗುವುದು ಎಂದು ರಾಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ಮೂರು ವಾರಗಳ ಹಿಂದೆ ತಿಳಿಸಿದ್ದರು. ದೇವಾಲಯವನ್ನು ಮೂರು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಅದರಲ್ಲಿ ಮೊದಲ ಹಂತದ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ ಭಕ್ತರು ದೇವಾಲಯವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಹೇಳಿದ್ದರು ರಾಮಮಂದಿರ ನಿರ್ಮಾಣದ ಮೊದಲ ಹಂತವನ್ನು 2023ರ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸಲು ದೇವಸ್ಥಾನದ ಟ್ರಸ್ಟ್ ನಿರ್ಧರಿಸಿದೆ.
ಮೊದಲ ಹಂತದಲ್ಲಿ, ನೆಲ ಮಹಡಿಯಲ್ಲಿ ಐದು ‘ಮಂಟಪಗಳು’ ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಗರ್ಭಗುಡಿ. ಗರ್ಭಗುಡಿಯಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ. ಐದು ಮಂಟಪಗಳ ನಿರ್ಮಾಣದಲ್ಲಿ ಸುಮಾರು 160 ಕಂಬಗಳನ್ನು ಬಳಸಲಾಗಿದೆ. ದೇವಾಲಯದ ಕೆಳಗಿನ ಸ್ತಂಭದಲ್ಲಿ ಶ್ರೀರಾಮನ ಸಂಕ್ಷಿಪ್ತ ವಿವರಣೆಯನ್ನು ಪ್ರಾರಂಭಿಸಲಾಗುವುದು. ವಿದ್ಯುತ್ ಸೌಲಭ್ಯ ಮತ್ತು ಇತರ ಸೌಲಭ್ಯಗಳನ್ನು ಪೂರ್ಣಗೊಳಿಸಬೇಕು. ಈ ಎಲ್ಲಾ ಕಾಮಗಾರಿಗಳು ಡಿಸೆಂಬರ್ 30 ರೊಳಗೆ ಪೂರ್ಣಗೊಳ್ಳಲಿವೆ. ಎರಡನೇ ಮಹಡಿಗಳನ್ನು 2024ರ ಡಿಸೆಂಬರ್ 30 ರೊಳಗೆ ಪೂರ್ಣಗೊಳಿಸಲಾಗುವುದು ಎಂದು ವಿವರಿಸಿದ್ದರು.