ನಮೀಬಿಯಾ : ಆಫ್ರಿಕಾ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಭಾನುವಾರ ನಮೀಬಿಯಾಕ್ಕೆ ತರೆಳಿದ್ದು ಈ ಮೂಲಕ ಈ ದೇಶಕ್ಕೆ ಭೇಟಿ ನೀಡಿದ ಭಾರತದ ಮೊದಲ ವಿದೇಶಾಂಗ ವ್ಯವಹಾರಗಳ ಸಚಿವ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಮೀಬಿಯಾದಲ್ಲಿಯ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಭಾರತದ ಬೆಳವಣಿಗೆಯನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇಶವು ಜಾಗತಿಕ ಮಟ್ಟದಲ್ಲಿ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಭಾರತ ಈಗ ಜಗತ್ತಿನ ಐದನೇ ಅತಿ ದೊಡ್ಡ ಆರ್ಥಿಕತೆ. ಸಧ್ಯದಲ್ಲೇ ನಾವು ಮೂರನೇ ಸ್ಥಾನಕ್ಕೇರುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಭಾರತ- ಆಫ್ರಿಕಾದ ದ್ವಿಪಕ್ಷೀಯ ಸಂಬಂಧವನ್ನು ಈಗ ಅವಲೋಕಿಸಿದರೆ ನನಗೆ ಕಾಣುವ ದೊಡ್ಡ ವ್ಯತ್ಯಾಸವೆಂದರೆ, ಭಾರತವನ್ನು ಆಫ್ರಿಕಾ ತನ್ನ ಜವಾಬ್ದಾರಿಯುತ ಪಾಲುದಾರ ರಾಷ್ಟ್ರವನ್ನಾಗಿ ನೋಡುತ್ತಿದೆ. ನಾವು ಈಗ ಆಫ್ರಿಕಾಕ್ಕೆ ಬಂದಿದ್ದೇವೆ. ಬೇರೆಯವರಿಗೂ ನಮಗೂ ಇರುವ ವ್ಯತ್ಯಾಸವೇನೆಂದರೆ, ನಾವು ನಿಮ್ಮ ಅಗತ್ಯಗಳಿಗೆ ಕಿವಿಗೊಡಲು ಬಂದಿದ್ದೇವೆ’ ಎಂದರು.
ಇದೇ ವೇಳೆ ಬಾಲಸೋರ್ ರೈಲು ದುರಂತಕ್ಕೆ ಸಂತಾಪ ಸೂಚಿಸಿದ ಅವರು, ನಮೀಬಿಯಾ ವಿದೇಶಾಂಗ ವ್ಯವಹಾರಗಳ ಸಚಿವರೂ ದುರಂತಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.